ADVERTISEMENT

ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ

ಪ್ರಾಣಾಪಾಯದಿಂದ ಪಾರಾದ ಕೋರ್ಟ್‌ ಕಮಿಷನರ್‌, ವಕೀಲರು, ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ
ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ   

ಬೆಂಗಳೂರು: ಯಲಹಂಕ ಉಪನಗರದ ಬೆಟ್ಟಹಳ್ಳಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗಳ ಪರಿಶೀಲನೆಗೆ ಹೋಗಿದ್ದ ಕೋರ್ಟ್ ಕಮಿಷನರ್‌ಗಳು, ಹೈಕೋರ್ಟ್‌ನ ವಕೀಲರು ಹಾಗೂ ಯಲಹಂಕ ಉಪನಗರ ಪೊಲೀಸರ ಮೇಲೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಗುಂಪೊಂದು ಹಲ್ಲೆ ಮಾಡಿದೆ. ಹೊಯ್ಸಳ ಹಾಗೂ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದೆ.

ಹೈಕೋರ್ಟ್‌ ನೇಮಿಸಿದ್ದ ಕೋರ್ಟ್‌ ಕಮಿಷನರ್ ಸಮಿತಿಯಲ್ಲಿದ್ದ ವಕೀಲರಾದ ಎಚ್.ವಿ.ಹರೀಶ್ ಹಾಗೂ ಡಿ.ಪಿ.ಪ್ರಸನ್ನ, ಸರ್ಕಾರಿ ವಕೀಲ ಎಸ್.ರಾಚಯ್ಯ, ವಕೀಲ ಪವನ್, ದೂರುದಾರರಾದ ಕವಿತಾ ಜೈನ್, ಜೋಶಿನ್ ಅಂಥೋಣಿ ಹಾಗೂ ಪೊಲೀಸರ ಮೇಲೆ ಸ್ಥಳೀಯರು ಹಾಗೂ ಕಸಾಯಿಖಾನೆಯವರು ಹಲ್ಲೆ ಮಾಡಿದ್ದಾರೆ.

ಈ ಸಂಬಂಧ 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರನ್ನು ಸಂಪರ್ಕಿಸಲಾಯಿತಾದರೂ ಅಧಿಕಾರಿಗಳು ಮೊಬೈಲ್‌ ಕರೆಗಳನ್ನು ಸ್ವೀಕರಿಸಲಿಲ್ಲ.

ADVERTISEMENT

ಬದುಕಿ ಬಂದದ್ದೇ ಪವಾಡ: ‘ಹೈಕೋರ್ಟ್‌ ಸೂಚನೆಯಂತೆ ಅಕ್ರಮ ಕಸಾಯಿಖಾನೆಗಳನ್ನು ಪರಿಶೀಲಿಸಲು ಹೋಗಿದ್ದೆವು. ಇದ್ದಕ್ಕಿದ್ದಂತೆ ಕೆಲವರು ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರು. ಕಾರಿನಿಂದ ನಮ್ಮನ್ನು ಕೆಳಗೆ ಇಳಿಯಲು ಸಹ ಬಿಡಲಿಲ್ಲ. ಅಲ್ಲಿಂದ ಬದುಕಿ ಬಂದದ್ದೇ ಒಂದು ರೀತಿಯ ಪವಾಡ’ ಎಂದು ಎಚ್.ರಾಚಯ್ಯ ಹೇಳಿದರು.

‘ಬೆಳಿಗ್ಗೆಯಿಂದ ಅಕ್ರಮ ಕಸಾಯಿಖಾನೆಗಳ ಪರಿಶೀಲನೆಗೆ ನಾಲ್ಕು ಕಡೆ ಹೋಗಿದ್ದೆವು. ಅಲ್ಲೆಲ್ಲ ಪರಿಶೀಲನೆಗೆ ಸಹಕಾರ ಸಿಕ್ಕಿತ್ತು. ಆದರೆ, ಡಿ.ಬಿ.ಹಳ್ಳಿಗೆ ನಮ್ಮ ತಂಡ ಹೋಗುತ್ತಿದ್ದಂತೆ ಅಲ್ಲಿಂದ ದುಷ್ಕರ್ಮಿಗಳ ತಂಡವು ನಮ್ಮನ್ನು ತಡೆದು ಹಲ್ಲೆಗೆ ಮುಂದಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.