
ಬೆಂಗಳೂರು: `ನಗರದ ಕಸ ವಿಲೇವಾರಿಯಲ್ಲಿ ಭಾರಿ ಅಕ್ರಮ ನಡೆದಿದೆ. ಬೆಂಗಳೂರಿಗಿಂತ ದೊಡ್ಡದಾದ ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಕಸ ವಿಲೇವಾರಿಗೆ ಖರ್ಚು ಮಾಡುತ್ತಿರುವುದು ತೀರಾ ಕಡಿಮೆ ಹಣ~ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕ ದಯಾನಂದ ರೆಡ್ಡಿ ಬುಧವಾರ ಇಲ್ಲಿ ದೂರಿದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ವಾರ್ಷಿಕ ರೂ 430 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಈ ನಗರಕ್ಕಿಂತ ದೊಡ್ಡದಾದ ದೆಹಲಿ ನಗರದಲ್ಲಿ ರೂ 170 ಕೋಟಿ ಮತ್ತು ಮುಂಬೈ ನಗರದಲ್ಲಿ ರೂ 190 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ತನಿಖೆ ನಡೆಸುವ ಅಗತ್ಯ ಇದೆ. ಕಸ ವಿಲೇವಾರಿಯು ಮಾಫಿಯಾ ಹಿಡಿತಕ್ಕೆ ಒಳಗಾಗಿದೆ. ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಲ್ಲಿ ವಿಫಲವಾಗಿರುವ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇದೇ 10ರಂದು ಸ್ವಾತಂತ್ರ್ಯ ಉದ್ಯಾನದ ಮುಂದೆ ಯುವ ಕಾಂಗ್ರೆಸ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.