ADVERTISEMENT

ಕಾಮಗಾರಿ ಹೆಸರಲ್ಲಿ ಜನರ ಹಣ ಲೂಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಣವನ್ನು ಬಿಬಿಎಂಪಿಯು ಕೊಳ್ಳೆ ಹೊಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ನಗರದ ಆನಂದ್‌ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ಮಾಡಿದರು.

ಹಲವು ಕಾಮಗಾರಿಗಳ ಹೆಸರಿನಲ್ಲಿ ಪಾಲಿಕೆಯು ರೂ 1,539 ಕೋಟಿ ಹಣವನ್ನು ಅಕ್ರಮವಾಗಿ ಸಂದಾಯ ಮಾಡಿದೆ. ಹಗರಣದಲ್ಲಿ ಸರ್ಕಾರವು ಭಾಗಿಯಾಗಿರುವುದರಿಂದ ಕ್ರಮಕ್ಕೂ ಮುಂದಾಗುತ್ತಿಲ್ಲ. ಪೂರ್ಣಗೊಂಡಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಹಣ ನೀಡಲು ಬಿಬಿಎಂಪಿಯ ಖಜಾನೆ ಖಾಲಿಯಾಗಿದೆ. ನೌಕರರಿಗೆ ವೇತನ ನೀಡಲು ಪಾಲಿಕೆ ಈಗ ಯಾವ ಕಟ್ಟಡವನ್ನು ಅಡವಿಡುತ್ತದೆ ನೋಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಮೇಲೆ ಅನಗತ್ಯ ತೆರಿಗೆ ವಿಧಿಸಿ, ಈಗ ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ತೆರಿಗೆ ವಿಧಿಸುವ ತೀರ್ಮಾನಕ್ಕೆ ಬಂದಿದೆ. ಇದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನೇ ಗುತ್ತಿಗೆ ನೀಡಿ ಸಾರ್ವಜನಿಕರು ವಲಸೆ ಹೋಗುವಂತೆ ಮಾಡುತ್ತಾರೆ. ಬಿಬಿಎಂಪಿಯಲ್ಲಿ ದುರಾಡಳಿತದ ದಾಖಲೆ ನಿರ್ಮಿಸಿರುವ ಸರ್ಕಾರ ತೊಲಗಬೇಕು ಎಂದು  ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಟಿ. ಆರ್. ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಮನೋಹರ್, ಕಾರ್ಯದರ್ಶಿ ನಟರಾಜ್ ಗೌಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.