ADVERTISEMENT

ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ಸಮರ್ಪಕ ಬಳಕೆಯಾಗಲಿ:ಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಿರುವ ₹ 5,600 ಕೋಟಿ ಹಣವನ್ನು ಕಾರ್ಮಿಕರ ಹಿತಕ್ಕಾಗಿಯೇ ಬಳಕೆಯಾಗಬೇಕು’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಒತ್ತಾಯಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಅವರು ಕಾರ್ಮಿಕರ ಕಲ್ಯಾಣಕ್ಕಿರುವ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಮುಂದಾಗಿದ್ದಾರೆ. ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡುವುದು, ಕಾರ್ಮಿಕರಿಗೆ ಎಲ್‌ಪಿಜಿ ಸಿಲೆಂಡರ್ ಪೂರೈಕೆ, ಸ್ಮಾರ್ಟ್‌ ಫೋನ್‌ ವಿತರಣೆ ಇದರಲ್ಲಿ ಸೇರಿವೆ’ ಎಂದರು.

‘ಸ್ಮಾರ್ಟ್‌ ಫೋನ್‌ ಬಳಕೆಯ ತಂತ್ರಜ್ಞಾನ ಕಾರ್ಮಿಕರಿಗೆ ತಿಳಿದಿಲ್ಲ. ಈಗಾಗಲೇ ಬಹುತೇಕ ಕಾರ್ಮಿಕರ ಮನೆಗಳಲ್ಲಿ ಎಲ್‌ಪಿಜಿ ಸೌಲಭ್ಯವಿದೆ. ಹಾಗಾಗಿ ಅನಾವಶ್ಯಕವಾಗಿ ಮಂಡಳಿಯ ಹಣ ಖರ್ಚುಮಾಡುವ ಯೋಜನೆ ಇದಾಗಿದೆ’ ಎಂದರು.

ADVERTISEMENT

‘ಉದ್ಯೋಗ ಖಾತರಿ ನೌಕರರನ್ನೂ ಈ ಮಂಡಳಿಗೆ ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಅಗತ್ಯವಿದ್ದರೆ ಉದ್ಯೋಗ ಖಾತರಿ ನೌಕರರಿಗೆ ಪ್ರತ್ಯೇಕ ಮಂಡಳಿ ರಚಿಸಲಿ. ಕಟ್ಟಡ ಕಾರ್ಮಿಕರ ಮಂಡಳಿಗೆ ಅವರನ್ನು ಸೇರಿಸುವುದು ಬೇಡ’ ಎಂದು ಅವರು ಒತ್ತಾಯಿಸಿದರು.

‘ಕಾರ್ಮಿಕರು ಮೃತಪಟ್ಟಾಗ ₹ 54 ಸಾವಿರ ಪರಿಹಾರ ನೀಡಲಾಗುತ್ತಿದೆ. ಅದನ್ನು ₹ 5 ಲಕ್ಷಕ್ಕೆ ಹೆಚ್ಚಿಸಬೇಕು. ಕಾರ್ಮಿಕರಿಗೆ ನೀಡುತ್ತಿರುವ ಪರಿಹಾರಗಳು ಮತ್ತು ಸವಲತ್ತುಗಳು ಸಕಾಲಕ್ಕೆ ತಲುಪುವಂತೆ ಯೋಜನೆ ರೂಪಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.