ADVERTISEMENT

ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕನ ವಿರುದ್ಧ ಪ್ರಕರಣ
ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕನ ವಿರುದ್ಧ ಪ್ರಕರಣ   

ಬೆಂಗಳೂರು: ಪಾನಮತ್ತರಾಗಿ ಆಂಬುಲೆನ್ಸ್ ಓಡಿಸುತ್ತಿದ್ದ ಆರೋಪದಡಿ ಪೂಜಪ್ಪ ಎಂಬುವರನ್ನು ಹಲಸೂರು ಗೇಟ್ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕುಮಾರ್ ಆಂಬುಲೆನ್ಸ್‌ ಸರ್ವಿಸ್‌’ ಏಜೆನ್ಸಿಯಲ್ಲಿ ಕೆಲಸ ಮಾಡುವ ಪೂಜಪ್ಪ, ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಸೈರನ್ ಹಾಕಿಕೊಂಡು ಮಲ್ಲೇಶ್ವರದಿಂದ ಎಲೆಕ್ಟ್ರಾನಿಕ್‌ಸಿಟಿ ಕಡೆಗೆ ತೆರಳುತ್ತಿದ್ದರು. ಆಂಬುಲೆನ್ಸ್‌ನೊಳಗೆ ರೋಗಿ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬರುತ್ತಿದ್ದ ಕಾರಣ ನೃಪತಂಗ ರಸ್ತೆಯಲ್ಲಿ ಸಂಚಾರ ಪೊಲೀಸರು ವಾಹನವನ್ನು ತಡೆದರು. ಆಲ್ಕೋಮೀಟರ್ ಮೂಲಕ ಪೂಜಪ್ಪ ಅವರನ್ನು ತಪಾಸಣೆಗೆ ಒಳಪಡಿಸಿದಾಗ, ಅವರ ದೇಹದಲ್ಲಿ 119 ಮಿಲಿ ಗ್ರಾಂ ಮದ್ಯದ ಪ್ರಮಾಣವಿತ್ತು.

‘ಎಲೆಕ್ಟ್ರಾನಿಕ್‌ಸಿಟಿಯಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಅಲ್ಲಿಗೆ ಹೊರಟಿದ್ದೆ. ಬೇಗನೇ ಆ ಸ್ಥಳ ತಲುಪಬೇಕೆಂಬ ಕಾರಣದಿಂದ ಸೈರನ್ ಬಳಕೆ ಮಾಡಿದೆ’ ಎಂದು ಪೂಜಪ್ಪ ಆರಂಭದಲ್ಲಿ ಹೇಳಿಕೆ ಕೊಟ್ಟರು. ಈ ಬಗ್ಗೆ ಆಂಬುಲೆನ್ಸ್ ಏಜೆನ್ಸಿಯ ಮಲ್ಲೇಶ್ವರ ಕಚೇರಿಗೆ ಕರೆ ಮಾಡಿ ವಿಚಾರಿಸಿದಾಗ, ಅಂಥ ಯಾವುದೇ ತುರ್ತು ಕರೆ ಬಂದಿರಲಿಲ್ಲವೆಂಬುದು ಖಚಿತವಾಯಿತು. ಆ ನಂತರ ತಪ್ಪೊಪ್ಪಿಕೊಂಡ ಪೂಜಪ್ಪ, ‘ಎಲೆಕ್ಟ್ರಾನಿಕ್‌ಸಿಟಿಯಲ್ಲಿರುವ ಗೆಳೆಯನ ಮನೆಗೆ ಹೋಗುತ್ತಿದ್ದೆ’ ಎಂದು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಸಾಮಾನ್ಯವಾಗಿ ಅಂಬುಲೆನ್ಸ್‌ಗಳ ತಪಾಸಣೆ ನಡೆಸುವುದು ಕಡಿಮೆ. ರೋಗಿಗಳನ್ನು ತುರ್ತಾಗಿ ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ಅವುಗಳ ಸುಗಮ ಸಂಚಾರಕ್ಕೆ ಎಲ್ಲರೂ ಅನುವು ಮಾಡಿಕೊಡುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಚಾಲಕರು, ರೋಗಿಗಳಿಲ್ಲದಿದ್ದರೂ ಸೈರನ್ ಹಾಕಿಕೊಂಡು ಹೋಗುವ ಹಾಗೂ ಪಾನಮತ್ತರಾಗಿ ಚಾಲನೆ ಮಾಡವ ಖಯಾಲಿ ಬೆಳೆಸಿಕೊಂಡಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ’ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.