ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆ.ಐ.ಒ.ಸಿ.ಎಲ್) ರೂ 805 ಕೋಟಿ ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ ಆರಂಭಿಸಲು ಉದ್ದೇಶಿಸಿದ್ದು, ಯೋಜನೆಗೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆಯನ್ನೂ ಪಡೆಯಲಾಗಿದೆ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮಲಯ್ ಚಟರ್ಜಿ ತಿಳಿಸಿದರು.
ನಗರದ ಕೋರಮಂಗಲದ ಕೆ.ಐ.ಒ.ಸಿ.ಎಲ್ ಪ್ರಧಾನ ಕಚೇರಿ ಆವರಣದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ಕುದುರೆಮುಖದಲ್ಲಿ ಕಲ್ಪಿಸಲಾದ ಸೌಕರ್ಯಗಳ ಪ್ರಯೋಜನ ಪಡೆಯಲು ಈ ಯೋಜನೆ ರೂಪಿಸಲಾಗಿದೆ. ವಿವಿಧ ಹಂತಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ' ಎಂದು ಹೇಳಿದರು.
`ಕುದುರೆಮುಖದಲ್ಲಿ ಲಭ್ಯವಿರುವ 1,622 ಎಕರೆ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ. 99 ವರ್ಷ ಅವಧಿಗೆ ಭೂಗುತ್ತಿಗೆಯನ್ನು ನವೀಕರಣ ಮಾಡಬೇಕು ಎಂಬ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆದಾಯ ಸಿಗುವುದಲ್ಲದೆ, ಉದ್ಯೋಗ ಸೃಷ್ಟಿಯೂ ಆಗಲಿದೆ' ಎಂದು ವಿವರಿಸಿದರು.
ಸಂಸ್ಥೆಯ ನಿರ್ದೇಶಕ (ವಾಣಿಜ್ಯ) ಎಂ.ವಿ. ಸುಬ್ಬರಾವ್, ಮುಖ್ಯ ವಿಚಕ್ಷಣಾ ಅಧಿಕಾರಿ ಶ್ರೀನಿವಾಸ ಗಲಗಲಿ, ಪ್ರಧಾನ ವ್ಯವಸ್ಥಾಪಕ (ಮಾನವ ಸಂಪನ್ಮೂಲ) ಎಸ್. ರಾಜೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.