ADVERTISEMENT

ಕುರಿಯನ್ ಸ್ಮರಣಾರ್ಥ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಯಲಹಂಕ: ಕ್ಷೀರಕ್ರಾಂತಿ ಹರಿಕಾರ ಡಾ.ವಿ.ಕುರಿಯನ್ ಅವರ ಸ್ಮರಣಾರ್ಥ ರಾಷ್ಟ್ರೋತ್ಥಾನ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಇಲ್ಲಿನ ಮದರ್ ಡೇರಿ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮದರ್ ಡೇರಿ ನಿರ್ದೇಶಕ ಎನ್.ಹನುಮೇಶ್, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನವಾಗಿದ್ದು, ತುರ್ತು ಸಂದರ್ಭಗಳಲ್ಲಿ ಮನುಷ್ಯನ ಪ್ರಾಣ ಉಳಿಸಲು ನೆರವಾಗುವ ರಕ್ತವನ್ನು ದಾನ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಆಡಳಿತ ವಿಭಾಗದ ವ್ಯವಸ್ಥಾಪಕ ಮಂ.ರಾ.ಅನಂತ್ ಮಾತನಾಡಿ, ಗ್ರಾಮೀಣ ಭಾಗದ ಹಾಲು ಉತ್ಪಾದಕರ ಬಾಳಿಗೆ ಹೊಸ ಚೈತನ್ಯವನ್ನು ನೀಡುವ ಮೂಲಕ ಇಡೀ ರಾಷ್ಟ್ರದಲ್ಲಿ ಕ್ಷೀರಕ್ರಾಂತಿಯನ್ನು ಮಾಡಿದ್ದ ಮಹಾನ್‌ಚೇತನ ಡಾ. ಕುರಿಯನ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ಶಿಬಿರ ಆಯೋಜಿ ಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೋತ್ಥಾನ ರಕ್ತನಿಧಿ ಶಿಬಿರದ ಸಂಯೋಜಕ ಎಸ್.ಶ್ರೀನರಸಿಂಹ ಶಾಸ್ತ್ರಿ, ಮದರ್ ಡೇರಿ ಉಪ ವ್ಯವಸ್ಥಾಪಕ ಜೆ.ಬಿ.ಪರೇಶ್, ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಸತೀಶ್ ಹಾಗೂ ಡೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿಬಿರದಲ್ಲಿ 83 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.