
ಬೆಂಗಳೂರು: ‘ಕುವೆಂಪು ಕರ್ನಾಟಕದ ರವೀಂದ್ರನಾಥ ಟ್ಯಾಗೋರ್. ಸಾಹಿತ್ಯದ ಮೂಲಕವೇ ತತ್ವಜ್ಞಾನ ವನ್ನು ಪಸರಿಸಿದ ರಸಋಷಿ ಅವರು’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬಣ್ಣಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ದೂರದರ್ಶನ ಚಂದನ ಪ್ರಶಸ್ತಿ 2013’ ಪ್ರದಾನ ಮಾಡಿ ಅವರು ಮಾತನಾಡಿದರು.
‘ರಾಷ್ಟ್ರಗೀತೆ ಇರುವಾಗ ನಾಡಗೀತೆ ಏಕೆ ಬೇಕು? ಎಂದು ರಾಜ್ಯಪಾಲನಾದ ಆರಂಭದ ದಿನಗಳಲ್ಲಿ ಅನಿಸಿತ್ತು. ಆದರೆ, ಕುವೆಂಪು ಹಾಗೂ ಅವರು ರಚಿಸಿದ ಕೃತಿಗಳನ್ನು ತಿಳಿದುಕೊಳ್ಳುವ ಸಲುವಾಗಿಯೇ ಮೈಸೂರಿಗೆ ತೆರಳಿದ್ದೆ. ನಾಡು ಕಂಡ ಬಹುದೊಡ್ಡ ಸಾಹಿತಿ ಅವರು’ ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕಮಲಾ ಹಂಪನಾ, ‘ದೂರದರ್ಶನ ಕೇಂದ್ರವು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅರ್ಹ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಎಲ್ಲ ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸ ಬೇಕು. ಅಲ್ಲದೇ ಸಮಾನ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ದೊರೆ ತರೆ ಇನ್ನಷ್ಟು ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವ ರಾಜ್ ವಿ.ಪಾಟೀಲ, ‘5,000 ಮಂದಿ ಕುಳಿತುಕೊಳ್ಳ ಲು ಸ್ಥಳಾವಕಾಶವಿರುವಷ್ಟು ದೊಡ್ಡ ಸಭಾಂಗಣ ವೊಂ ದನ್ನು ನಗರದಲ್ಲಿ ನಿರ್ಮಾಣ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.