ADVERTISEMENT

ಕೃಷಿ ಬಜೆಟ್: ಸ್ವಾಗತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:20 IST
Last Updated 24 ಫೆಬ್ರುವರಿ 2011, 20:20 IST

ಬೆಂಗಳೂರು: ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ  ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿರುವ ಸರ್ಕಾರದ ಕ್ರಮವನ್ನು ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಮಹಾಮಂಡಳಿ (ಬಿಸಿಐಸಿ) ಸ್ವಾಗತಿಸಿದೆ.  ‘ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಕೃಷಿ ರಂಗದ ಸಮಗ್ರ ಪ್ರಗತಿಗೆ  ಸರ್ಕಾರ ವಿಶೇಷ ಪ್ರಯತ್ನ ನಡೆಸಿದೆ’ ಎಂದು ಬಿಸಿಐಸಿ ಪ್ರಕಟಣೆ ತಿಳಿಸಿದೆ.

ತಯಾರಿಕಾ ಕ್ಷೇತ್ರ ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರಗತಿ ದಾಖಲಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ವೃದ್ಧಿ ದರ ಹೆಚ್ಚಿದೆ. ಸಂಪನ್ಮೂಲ ಕ್ರೋಡೀಕರಣ, ತೆರಿಗೆ ಸಂಗ್ರಹವೂ ಏರಿಕೆ ಕಂಡಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷವಾಗಿ ಭೂಮಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಕಲ್ಪಿಸಿರುವ ಸೌಲಭ್ಯಗಳು ಚಿಕ್ಕ ಹಿಡುವಳಿ ಮತ್ತು ಮಧ್ಯಮ ವರ್ಗದ ರೈತರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸಲಿದೆ ಎಂದು ಹೇಳಿದೆ.

ಅಭಿವೃದ್ಧಿ ಪೂರಕ ಬಜೆಟ್-‘ಸಿಐಐ’: ‘ಪ್ರಸಕ್ತ ಸಾಲಿನ ಬಜೆಟ್ ರಾಜ್ಯದ ಒಟ್ಟು ಅಭಿವೃದ್ಧಿ ಮತ್ತು ಜನ ಕಲ್ಯಾಣದೆಡೆಗೆ ಧನಾತ್ಮಕ ಹೆಜ್ಜೆಯಾಗಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕ ಘಟಕದ ಅಧ್ಯಕ್ಷ ಎ. ರಾಮನ್ ಪ್ರತಿಕ್ರಿಯಿಸಿದ್ದಾರೆ.  ಇದು ಬದ್ಧತೆಯಿಂದ ಕೂಡಿರುವ ಜವಾಬ್ದಾರಿಯುತ ದಾಖಲೆ ಪತ್ರವಾಗಿದ್ದು, ತ್ರೈಮಾಸಿಕ ಸಾಧನೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಒಟ್ಟು ವಾರ್ಷಿಕ ಹಣಕಾಸು ಪ್ರಗತಿಯನ್ನು ಮಂಡಿಸಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ವಿಶೇಷ ಕೊಡುಗೆ ಘೋಷಿಸಲಾಗಿದೆ. ಇದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.