ADVERTISEMENT

ಕೃಷ್ಣ ಭಟ್ ವಿರುದ್ಧ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:55 IST
Last Updated 4 ಫೆಬ್ರುವರಿ 2011, 19:55 IST

ಬೆಂಗಳೂರು: ವಿಶ್ವ ಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ. ಕೃಷ್ಣ ಭಟ್ ಅವರ ವಿರುದ್ಧ ಹೈಕೋರ್ಟ್ ಶುಕ್ರವಾರ ಆರೋಪಪಟ್ಟಿ ನಿಗದಿ ಮಾಡಿದೆ.

ಸಂಘದ ಸದಸ್ಯರಿಗೆ ಹಿರಿತನದ ಆಧಾರದ ಮೇಲೆ ನಿವೇಶನ ನೀಡುವ ಸಂಬಂಧ ಹಿರಿತನದ ಪಟ್ಟಿ ತಯಾರಿಸುವಂತೆ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಇವರು ಉಲ್ಲಂಘನೆ ಮಾಡಿರುವುದಾಗಿ ದೂರಿ ಬಿ. ಶ್ರೀನಿವಾಸ ರಾವ್ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ವಿಭಾಗೀಯ ಪೀಠ ಆರೋಪಪಟ್ಟಿ ನಿಗದಿ ಮಾಡಿತು.

ವಿಚಾರಣೆ ವೇಳೆ ಹಾಜರಾಗುವಂತೆ ಕೋರ್ಟ್‌ನಿಂದ ವಾರೆಂಟ್ ಜಾರಿಯಾಗಿದ್ದರೂ ಇವರು ಕೆಲವು ಬಾರಿ ಹಾಜರಾಗಿರಲಿಲ್ಲ. ವಿವಾದಕ್ಕೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆ ಪಡೆಯಲು ಪ್ರಕರಣವನ್ನು ಫೆ.18ಕ್ಕೆ ಮುಂದೂಡಲಾಯಿತು.

ದಾಖಲೆ ಹಾಜರಿಗೆ ಆದೇಶ
ಜಯನಗರದ 4-ಟಿ ಬ್ಲಾಕ್‌ನಲ್ಲಿ (19ನೇ ಮುಖ್ಯ ರಸ್ತೆ) ವಸತಿ ಪ್ರದೇಶದಲ್ಲಿ ಮೂರು ಅಂತಸ್ತುಗಳ ಹೋಟೆಲ್‌ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೆಲವೊಂದು ದಾಖಲೆಗಳನ್ನು ಹಾಜರು ಪಡಿಸುವಂತೆ ಬಿಬಿಎಂಪಿಗೆ ಆದೇಶಿಸಿದೆ.

100 ಆಸನಗಳ ವ್ಯವಸ್ಥೆಯುಳ್ಳ ಹೋಟೆಲ್ ನಿರ್ಮಾಣ ಪ್ರಶ್ನಿಸಿ ಕೌಟುಂಬಿಕ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಗೀತಾದೇವಿ, ಇನ್‌ಫೋಸಿಸ್‌ನ ಮಾಜಿ ಉಪಾಧ್ಯಕ್ಷ ಎನ್.ಎಸ್.ರಾಮಾ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

ಕಾನೂನಿಗೆ ಅನುಗುಣವಾಗಿಯೇ ಈ ಅನುಮತಿ ನೀಡಲಾಗಿದೆ ಎಂದು ಪಾಲಿಕೆ ತಿಳಿಸಿರುವ ಹಿನ್ನೆಲೆಯಲ್ಲಿ, ಅದರ ದಾಖಲೆಗಳನ್ನು ಪೀಠ ಪರಿಶೀಲಿಸಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.