ಬೆಂಗಳೂರು: ಹಿರಿಯ ಕವಿ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಅವರಿಗೆ ಕೆ.ಎಸ್.ನ. ಪ್ರಶಸ್ತಿ ಮತ್ತು ಸುಗಮ ಸಂಗೀತ ಹಿರಿಯ ಕಲಾವಿದ ವೈ.ಕೆ.ಮುದ್ದುಕೃಷ್ಣ ಅವರಿಗೆ ಕೆ.ಎಸ್.ನ. ಕಾವ್ಯಗಾಯನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. 2017ನೇ ಸಾಲಿನ ಈ ಪ್ರಶಸ್ತಿಗಳು ತಲಾ ₹25,000 ನಗದು ಒಳಗೊಂಡಿದೆ.
ನಂತರ ಮಾತನಾಡಿದ ಚಿರಂಜೀವಿ ಸಿಂಗ್, ‘ಕೆ.ಎಸ್.ನರಸಿಂಹಸ್ವಾಮಿ ಅವರ ಶೃಂಗಾರ ಕಾವ್ಯ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕಿದೆ. ಕುವೆಂಪು ಭಾಷಾ ಪ್ರಾಧಿಕಾರ ಈ ಯೋಜನೆ ಕೈಗೆತ್ತಿಕೊಳ್ಳಲಿ’ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಕೆ.ಎಸ್.ನ ಅವರ ಹುಟ್ಟೂರು ಕಿಕ್ಕೇರಿಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಲು ಮತ್ತು ಗ್ರಾಮದ 650ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಕೆರೆಯನ್ನು ಕೆ.ಎಸ್.ನ ಸರೋವರವಾಗಿ ಅಭಿವೃದ್ಧಿಪಡಿಸುವ ಯೋಜನೆಗಾಗಿ ರಾಜ್ಯ ಸರ್ಕಾರ ಟ್ರಸ್ಟ್ಗೆ ₹4.75 ಕೋಟಿ ಅನುದಾನ ನೀಡಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.