ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಸಮೀಪದ ವಿರುಪಾಕ್ಷಪುರದಲ್ಲಿ ಭಾನುವಾರ ನಡೆದಿದೆ.
ವಿರುಪಾಕ್ಷಪುರ ನಿವಾಸಿ ಶ್ವೇತಾ(24) ಆತ್ಮಹತ್ಯೆ ಮಾಡಿಕೊಂಡವರು. ಅವರು ಐದು ವರ್ಷದ ಹಿಂದೆ ಗಣೇಶ್ ಎಂಬುವರನ್ನು ವಿವಾಹವಾಗಿದ್ದರು. ಸ್ವಂತ ಟ್ರಾವೆಲ್ಸ್ ನಡೆಸುತ್ತಿದ್ದ ಗಣೇಶ್ ಪತ್ನಿಯೊಂದಿಗೆ ಅನ್ಯೋನ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದರು.
ಭಾನುವಾರ ಶ್ವೇತಾ ಪೋಷಕರು ಮನೆಗೆ ಬಂದಿದ್ದರು. ಅವರು ಮಾತನಾಡುತ್ತಾ ಕುಳಿತಿದ್ದಾಗ ಕೋಣೆಗೆ ಹೋದ ಶ್ವೇತಾ ನೇಣು ಹಾಕಿಕೊಂಡಿದ್ದಾರೆ. ಅವರಿಗೆ ಎರಡು ಗಂಡು ಮಕ್ಕಳಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನೆ ಸಂಬಂಧ ಶ್ವೇತಾ ಪೋಷಕರು ಗಣೇಶ್ನ ಅಣ್ಣ ಮೋಹನ್ಬಾಬು ಹಾಗೂ ಅತ್ತಿಗೆ ಮಾಲಾ ವಿರುದ್ಧ ದೂರು ನೀಡಿದ್ದಾರೆ. ನಮ್ಮಡನೆ ಮಾತನಾಡಲು ಶ್ವೇತಾಗೆ ಫೋನ್ ಕೊಡುತ್ತಿರಲಿಲ್ಲ ಹಾಗೂ ಅವಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ಕೊಡಿಗೇಹಳ್ಳಿ ಪೊಲೀಸರು ಹೇಳಿದರು.
ಮಹಿಳೆ ಆತ್ಮಹತ್ಯೆ : ಅಸ್ವಸ್ಥರಾಗಿದ್ದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ನಂದ ಎಂಬುವರ ಪತ್ನಿ ಚಿತ್ರಾ(30) ಆತ್ಮಹತ್ಯೆ ಮಾಡಿಕೊಂಡವರು. ಅವರು ಗಾರೇಬಾವಿಪಾಳ್ಯದ ನರಸಿಂಹ ರೆಡ್ಡಿ ಲೇಔಟ್ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಮೂರು ಮಕ್ಕಳಿದ್ದು, ಚಿತ್ರಾ ಅವರಿಗೆ ಇತ್ತೀಚೆಗೆ ಗರ್ಭಕೋಶದ ಶಸ್ತ್ರಚಿಕಿತ್ಸೆಯಾಗಿತ್ತು. ಇದರಿಂದ ಅಸ್ವಸ್ಥರಾಗಿದ್ದ ಅವರು ರಾತ್ರಿ ಮಕ್ಕಳು ಮಲಗಿದ್ದ ವೇಳೆ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.
ಕುರಿ ವ್ಯಾಪಾರ ಮಾಡುತ್ತಿದ್ದ ನಂದ ಅವರು ತಮಿಳುನಾಡಿಗೆ ಹೋಗಿದ್ದರು. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.