ಬೆಂಗಳೂರು: `ಕ್ರೀಡೆಯಲ್ಲಿ ಸಾಧನೆ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಸೇವೆಯಲ್ಲಿ ಬಡ್ತಿ ನೀಡುವಂತ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು~ ಎಂದು ಸಚಿವ ಆರ್.ಅಶೋಕ ತಿಳಿಸಿದರು.
ನಗರದ ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್ ವತಿಯಿಂದ ಬುಧವಾರ ಆಯೋಜಿಸಿದ್ದ `2011ನೇ ಸಾಲಿನ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಕ್ರೀಡೆಯಲ್ಲಿ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನದ ರೂಪದಲ್ಲಿ ಹಣ ಘೋಷಿಸುವಂತಹ ಪದ್ಧತಿ ದೇಶದಲ್ಲಿ ಬೆಳೆದಿದೆ. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಅವರ ಸೇವೆಯಲ್ಲಿ ಬಡ್ತಿ ನೀಡುವುದು ದೊಡ್ಡ ಉಡುಗೊರೆ ಹಾಗೂ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ನೀಡುವ ಮೂಲಕ ಹೆಚ್ಚು ಕ್ರೀಡಾಪಟುಗಳು ಇಲಾಖೆಯನ್ನು ಸೇರುವಂತೆ ಮಾಡಬೇಕು~ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿರುವ ಕಾನ್ಸ್ಟೇಬಲ್ಗಳು ರಾಜ್ಯದಲ್ಲಿದ್ದಾರೆ. ಅವರ ಸಾಧನೆಗೆ ನಿಜವಾದ ಪ್ರೋತ್ಸಾಹ ದೊರೆಯುತ್ತಿಲ್ಲ. ನಮ್ಮ ಪ್ರೋತ್ಸಾಹವೇ ಅವರ ಯಶಸ್ಸಿಗೆ ಬಂಡವಾಳ, ಆದರೆ ಕ್ರೀಡೆಗೆ ಹಣ ಖರ್ಚು ಮಾಡುವ ದೇಶ ನಮ್ಮದಲ್ಲ. ಈ ಎರಡು ವ್ಯವಸ್ಥೆಗಳನ್ನು ಶೀಘ್ರ ಜಾರಿಗೊಳಿಸುವುದಾಗಿ ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮಾತನಾಡಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಫೆಬ್ರುವೆರಿ 15ರೊಳಗೆ ಕರಡು ಪ್ರತಿಯನ್ನು ಗೃಹ ಸಚಿವರಿಗೆ ಮಂಡಿಸುವುದಾಗಿ ತಿಳಿಸಿದರು. ವಿವಿಧ ಜಿಲ್ಲೆಗಳ ಪೊಲೀಸ್, ವಿಶೇಷ ಪಡೆಗಳ 36 ತಂಡಗಳು ಪಥ ಸಂಚಲನ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.