ADVERTISEMENT

ಖರಗಪುರ ಐಐಟಿ ನಿರ್ದೇಶಕರ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:34 IST
Last Updated 21 ಜುಲೈ 2013, 19:34 IST

ಬೆಂಗಳೂರು: ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ನಿರ್ದೇಶಕರ ಸ್ಥಾನವನ್ನು ಒಂದು ವರ್ಷದಿಂದ ಖಾಲಿ ಉಳಿಸಲಾಗಿದ್ದು, ಶೀಘ್ರವೇ ನಿರ್ದೇಶಕರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಐಐಟಿ ಹಳೆಯ ವಿದ್ಯಾರ್ಥಿಗಳು `ಟೆಕ್ನಾಲಜಿ ಅಲಮ್ನಿ ಅಸೋಸಿಯೇಷನ್' ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದರು.

ಐಐಟಿ ಹಳೇ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಉತ್ಕಲ್ ಮೊಹಂತಿ ಮಾತನಾಡಿ, `ಒಂದು ವರ್ಷದಿಂದ ಖರಗಪುರ ಐಐಟಿಯ ನಿರ್ದೇಶಕರ ಸ್ಥಾನ ಖಾಲಿ ಉಳಿದಿದೆ. ಈ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶೋಧನಾ ಸಮಿತಿಯು ಪ್ರೊ.ಪಾರ್ಥ ಪ್ರತಿಮ್ ಚಕ್ರವರ್ತಿ ಅವರನ್ನು ನಿರ್ದೇಶಕನನ್ನಾಗಿ ಆಯ್ಕೆ ಮಾಡಲು ಸೂಚಿಸಿದೆ. ಆದರೆ, ವಿಚಕ್ಷಣಾ ಆಯುಕ್ತರು ನೇಮಕಾತಿಯನ್ನು ತಡೆಹಿಡಿದಿದ್ದಾರೆ' ಎಂದು ದೂರಿದರು.

`ಪಾರ್ಥ ಪ್ರತಿಮ್ ಚಕ್ರವರ್ತಿ ಅವರ ಮೇಲಿದ್ದ ಆರೋಪಗಳು ಸುಳ್ಳೆಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿದ್ದರೂ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಲಾಗುತ್ತಿದೆ. ಆಡಳಿತದಲ್ಲಿ ಅಪಾರ ಅನುಭವವುಳ್ಳ ಚಕ್ರವರ್ತಿ ಅವರನ್ನು ತಕ್ಷಣವೇ ಐಐಟಿ ನಿರ್ದೇಶಕರನ್ನಾಗಿ ನೇಮಿಸಬೇಕು' ಎಂದು ಅವರು ಆಗ್ರಹಿಸಿದರು.

ಇದಕ್ಕೂ ಮುನ್ನ ಕಬ್ಬನ್ ಉದ್ಯಾನದಿಂದ ಸ್ವಾತಂತ್ರ್ಯ ಉದ್ಯಾನವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.