ಮಹದೇವಪುರ: ಇಲ್ಲಿಗೆ ಸಮೀಪದ ನಲ್ಲೂರುಹಳ್ಳಿ ಗ್ರಾಮದಲ್ಲಿ ಖಾಸಗಿ ಕಾಂಕ್ರೀಟ್ ಮಿಕ್ಸಿಂಗ್ ಕಂಪೆನಿಯೊಂದು ಕಳೆದ ಆರೇಳು ತಿಂಗಳಿನಿಂದ ತ್ಯಾಜ್ಯವನ್ನು ಸ್ಮಶಾನಕ್ಕೆ ಸುರಿಯುತ್ತಿದೆ. ಇದರಿಂದಾಗಿ ಸ್ಮಶಾನದಲ್ಲಿನ ಅನೇಕ ಗೋರಿಗಳು ಮುಚ್ಚಿ ಹೋಗಿದ್ದು ಸುತ್ತಲಿನ ವಾತಾವರಣ ಕಲುಷಿತಗೊಂಡಿದೆ.
ಅಲ್ಲದೆ ಕಾಂಕ್ರೀಟ್ ಮಿಕ್ಸಿಂಗ್ ಕಾರ್ಖಾನೆಯಿಂದ ದಿನವೂ ಸಾಕಷ್ಟು ಸಿಮೆಂಟ್ ಮಿಶ್ರಿತ ದೂಳು ಹೊರಬರುತ್ತಿದೆ. ಇದು ಹತ್ತಿರದಲ್ಲಿನ ಅನೇಕ ಮನೆಗಳ ಮೇಲೆ ಬೀಳುತ್ತಿದೆ. ಇದರಿಂದಾಗಿ ನಿವಾಸಿಗಳು ಮನೆಯ ಹೊರಗೆ ನೆಮ್ಮದಿಯಿಂದ ಕುಳಿತುಕೊಳ್ಳಲು ಹಾಗೂ ಕೆಲ ನಿಂತು ಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸ್ಮಶಾನದಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚು ಗೋರಿಗಳು ಘನ ತ್ಯಾಜ್ಯದಿಂದ ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಅಲ್ಲದೆ ಗೋರಿಗಳ ಮುಂಭಾಗದ ನಾಮಫಲಕಗಳು ನೆಲಸಮಗೊಂಡಿವೆ. ಇದರಿಂದಾಗಿ ಮುಂಬರುವ ಪಿತೃಪಕ್ಷದಲ್ಲಿ ಮೃತರ ಗೋರಿಗಳಿಗೆ ಪೂಜೆ ಸಲ್ಲಿಸುವುದು ಹೇಗೆ ಎಂದು ಅನೇಕರು ಆತಂಕಗೊಂಡಿದ್ದಾರೆ.
ಈ ಕುರಿತು ಸ್ಥಳೀಯ ಜನತೆ ಸಂಬಂಧಪಟ್ಟ ಬಿಬಿಎಂಪಿ ವೈಟ್ಫೀಲ್ಡ್ ವಲಯ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ.
`ಸಮಸ್ಯೆಯನ್ನು ಬಿಬಿಎಂಪಿ ಸದಸ್ಯರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗನೆ ಕಾಂಕ್ರಿಟ್ ಮಿಶ್ರಣ ಕಂಪೆನಿಯಿಂದ ಇದುವರೆಗೂ ಹರಿ ಬಿಟ್ಟಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಬೇಕು. ಸ್ಮಶಾನವನ್ನು ಶುಚಿಗೊಳಿಸಬೇಕು~ ಎಂದು ಪರಿಸರ ಹೋರಾಟಗಾರ ಸಿ.ಎನ್.ಅರುಣಕುಮಾರ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.