ADVERTISEMENT

ಗಣೇಶ ಮೆರವಣಿಗೆ ವೇಳೆ ಇಬ್ಬರ ಕೊಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 20:03 IST
Last Updated 23 ಸೆಪ್ಟೆಂಬರ್ 2013, 20:03 IST

ಬೆಂಗಳೂರು: ಲಿಂಗರಾಜಪುರ ಸಮೀಪದ ಜಾನಕಿರಾಮಲೇಔಟ್‌ನಲ್ಲಿ ಭಾನುವಾರ ರಾತ್ರಿ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಯುವಕರಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಕೆಎಚ್‌ಬಿ ಕಾಲೊನಿಯ ಕಾರ್ತಿಕ್‌ (19) ಮತ್ತು ಆತನ ಸ್ನೇಹಿತ ಕೇಶವ (18) ಕೊಲೆಯಾದವರು. ಅವರು ಗಾರೆ ಕೆಲಸ ಮಾಡುತ್ತಿದ್ದರು.

ಕೆಎಚ್‌ಬಿ ಕಾಲೊನಿಯಲ್ಲಿ ಪ್ರತಿ ಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಹಲ ಸೂರು ಕೆರೆಯಲ್ಲಿ ವಿಸರ್ಜನೆ ಮಾಡಲು ರಾತ್ರಿ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಗುತ್ತಿತ್ತು. ಈ ವೇಳೆ ಕಾರ್ತಿಕ್‌, ಕೇಶವ ಮತ್ತಿತರ ಸ್ಥಳೀಯ ಯುವಕರು ಪಾನಮತ್ತರಾಗಿ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ನೃತ್ಯ ಮಾಡುತ್ತಿದ್ದರು. ಆಗ ಕೇಶವ, ಆಕಸ್ಮಿಕವಾಗಿ ಭೀಮರಾಜ್‌ ಎಂಬಾತನ ಕಾಲು ತುಳಿದಿದ್ದಾನೆ. ಇದರಿಂದಾಗಿ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಗಿದೆ.

ಈ ಹಂತದಲ್ಲಿ ಭೀಮರಾಜ್‌ ಮತ್ತು ಸಹಚರರು ಕೇಶವನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತ ನನ್ನು ರಕ್ಷಿಸಲು ಹೋದ ಕಾರ್ತಿಕ್‌ಗೆ ಭೀಮರಾಜ್‌ ಮತ್ತು ಸಹಚರರು ಚಾಕು ವಿನಿಂದ ಇರಿದಿದ್ದಾರೆ. ಅಲ್ಲದೇ, ಕೇಶವನ ಕುತ್ತಿಗೆಗೂ ಚಾಕು ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಭೀಮರಾಜ್‌, ಪಪ್ಪಿ, ಭರತ್‌, ದಿಲೀಪ್‌, ಸುರೇಶ, ಆನಂದ್‌, ಸರವಣ, ಚಂದ್ರಶೇಖರ್‌ ಮತ್ತು ವಿಜಯ್‌ ಎಂಬುವರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬಾಣಸವಾಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಆಗಾಗ್ಗೆ ಜಗಳವಾಗುತ್ತಿತ್ತು
ಕಾರ್ತಿಕ್‌ ಹಾಗೂ ಕೇಶವ ಕೆಎಚ್‌ಬಿ ಕಾಲೊನಿ ‘ಎ’ ಬ್ಲಾಕ್‌ ನಿವಾಸಿಗಳು. ಭೀಮರಾಜ್‌ ಮತ್ತು ಸಹಚರರು ಕೆಎಚ್‌ಬಿ ಕಾಲೊನಿ ‘ಬಿ’ ಬ್ಲಾಕ್‌ ನಿವಾಸಿಗಳು. ಎರಡು ಬ್ಲಾಕ್‌ ಗಳ ಯುವಕರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಆಗಾಗ್ಗೆ ಜಗಳ ವಾಗು ತ್ತಿತ್ತು.  ಅದೇ ರೀತಿ ರಾತ್ರಿ ಗಣೇಶ ಮೂರ್ತಿ ಉತ್ಸವದ ಸಂದರ್ಭದಲ್ಲಿ ಜಗಳವಾಯಿತು’ ಎಂದು ಸ್ಥಳೀಯ ಯುವಕ ಮಧಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಗಳದ ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಭೀಮರಾಜ್‌ ಮತ್ತು ಸ್ನೇಹಿತರು, ಅವರಿಬ್ಬರಿಗೂ ಚಾಕುವಿನಿಂದ ಇರಿದು ಪರಾರಿ ಯಾದರು’ ಎಂದು ಮಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.