ADVERTISEMENT

ಗುಜರಿ ವ್ಯಾಪಾರಿಯ ಬರ್ಬರ ಕೊಲೆ

ರುಂಡ–ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:51 IST
Last Updated 1 ಮಾರ್ಚ್ 2014, 19:51 IST

ಬೆಂಗಳೂರು: ದೇವರಜೀವನಹಳ್ಳಿ ಸಮೀಪದ ಶಾಂಪುರ­ದಲ್ಲಿ ಸಿಕ್ಕಿದ್ದ ರುಂಡವಿಲ್ಲದ ದೇಹದ ಗುರುತು ಪತ್ತೆ­ಯಾಗಿದ್ದು, ಕೊಲೆಯಾದ ವ್ಯಕ್ತಿ ಶಿವಾಜಿನಗರದ ಅಜೀಜ್‌ ಖಾನ್ (35) ಎಂದು ಪೊಲೀ­ಸರು ಹೇಳಿದ್ದಾರೆ.

ಅಜೀಜ್‌ ಅವರನ್ನು ಮಾರ­ಕಾಸ್ತ್ರಗಳಿಂದ ಕೊಚ್ಚಿ  ಭೀಕರವಾಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳು, ದೇಹವನ್ನು ಮಾತ್ರ ಮೂಟೆ ಕಟ್ಟಿ ಶಾಂಪುರ ಹಳಿಗಳ ಬಳಿ ಬಿಸಾಡಿದ್ದರು. ಆದರೆ, ಕತ್ತರಿಸಿದ್ದ ತಲೆ ಮತ್ತು ಕೈ–ಕಾಲುಗಳನ್ನು ತೆಗೆದು­ಕೊಂಡು ಹೋಗಿ ಬಾಣಸವಾಡಿ ಸಮೀಪದ ನಾಗೇನ­ಹಳ್ಳಿ ರೈಲ್ವೆ ಪ್ರದೇಶದಲ್ಲಿ ಎಸೆದಿದ್ದರು. ಫೆ.27ರಂದು ಶಾಂಪುರದಲ್ಲಿ ದೇಹ ಪತ್ತೆಯಾಗಿತ್ತು. ಆದರೆ, ರುಂಡ ಇರಲಿಲ್ಲ­ವಾದ್ದರಿಂದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಶನಿವಾರ ಬೆಳಿಗ್ಗೆ ಬಾಣಸವಾಡಿ ಠಾಣೆಗೆ ಕರೆ ಮಾಡಿದ ಸ್ಥಳೀಯರು, ನಾಗೇನಹಳ್ಳಿಯ ಹಳಿಗಳ ಪಕ್ಕದಲ್ಲಿ ವ್ಯಕ್ತಿಯ ರುಂಡ ಹಾಗೂ ಕೈ–ಕಾಲುಗಳು ಬಿದ್ದಿರು­ವುದಾಗಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ದೇವರಜೀವನಹಳ್ಳಿ ಠಾಣೆಗೆ ಕರೆ ಮಾಡಿ ಇತ್ತೀಚೆಗೆ ಪತ್ತೆಯಾಗಿದ್ದ ರುಂಡವಿಲ್ಲದ ದೇಹದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಆ ಅಂಗಾಂಗಗಳು ಒಬ್ಬರದೇ ಎಂಬುದು ಖಾತ್ರಿ­ಯಾದ ಬಳಿಕ, ನಗರದ ವಿವಿಧ ಠಾಣೆಗಳಲ್ಲಿ ದಾಖ­ಲಾಗಿರುವ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದ್ದಾರೆ. ಆಗ, ಕೊಲೆಯಾದ ವ್ಯಕ್ತಿ ಶಿವಾಜಿನಗರದ ತಿಮ್ಮಯ್ಯ ರಸ್ತೆ  ನಿವಾಸಿ ಅಜೀಜ್‌ ಖಾನ್‌ ಎಂದು ಗೊತ್ತಾಗಿದೆ.

ಶಿವಾಜಿನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅಜೀಜ್‌, ‘ಪರಿಚಿತರು ₨ 50 ಸಾವಿರ ಹಣ ಕೊಡಬೇಕಿದೆ. ಟ್ಯಾನರಿ ರಸ್ತೆಗೆ ಹೋಗಿ ಅವರಿಂದ ಹಣ ಪಡೆದುಕೊಂಡು ಬರುತ್ತೇನೆ’ ಎಂದು ಪತ್ನಿಗೆ ತಿಳಿಸಿ, ಫೆ.25ರ ರಾತ್ರಿ ಮನೆಯಿಂದ ಹೊರ ಹೋಗಿದ್ದರು. ಆದರೆ, ಬೆಳಿಗ್ಗೆಯಾದರೂ ಅವರು ವಾಪಸ್‌ ಬಂದಿಲ್ಲ. ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದ್ದರಿಂದ ಗಾಬರಿಗೊಂಡ ಅವರ ಸೋದರ ದಸ್ತಗಿರ್ ಖಾನ್‌, ಅಜೀಜ್‌ ಕಾಣೆಯಾಗಿರುವ ಬಗ್ಗೆ ಶಿವಾಜಿನಗರ ಠಾಣೆಗೆ ಫೆ.26ರಂದು ದೂರು ಕೊಟ್ಟಿದ್ದರು.

‘ಅಜೀಜ್‌ ಅವರು ಮನೆಯಿಂದ  ಹೊರಡು­ವುದಕ್ಕೂ ಮೊದಲು ಸಿಕಂದರ್‌ ಎಂಬುವರ ಜತೆ ಮೊಬೈಲ್‌­ನಲ್ಲಿ ಮಾತನಾಡಿದ್ದರು. ರಾತ್ರಿ 11 ಗಂಟೆಗೆ ಅವರ ಅಕ್ಕ ಸಹ ಕರೆ ಮಾಡಿದ್ದು, ತಾನು ಟ್ಯಾನರಿ ರಸ್ತೆಯಲ್ಲಿರುವುದಾಗಿ ಅಜೀಜ್‌ ಹೇಳಿದ್ದರು. ನಂತರ ಸ್ವಲ್ಪ ಸಮಯದಲ್ಲೇ ಅವರ ಮೊಬೈಲ್‌ ಸ್ವಿಚ್‌ ಆಗಿತ್ತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.