ಬೆಂಗಳೂರು: ‘ಸಂಬಳ ಕೇಳಿದ್ದಕ್ಕೆ ಕೆ.ಆರ್.ಪುರ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ನಾಗೇಶ್ ಕುಮಾರ್ ಹಾಗೂ ಮೂವರು ಮೇಸ್ತ್ರಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಕೆಲ ಪೌರಕಾರ್ಮಿಕರು ಗುರುವಾರ ಕೆ.ಆರ್.ಪುರ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಸಕಾಲಕ್ಕೆ ಸಂಬಳ ಕೊಡದಿರುವುದನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಇದರಿಂದ ಕೆರಳಿದ ಗುತ್ತಿಗೆದಾರ ನಾಗೇಶ್, ಮೇಸ್ತಿಗಳಾದ ಅಕ್ಷಯ್, ನಂದೀಶ್ ಹಾಗೂ ಸಾದಿಕ್ ಅವರು ಅ.12ರಂದು ಕಾರ್ಮಿಕರಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಿದರು. ‘ನಿಮ್ಮ ಸಂಬಳ ನನ್ನ ಪ್ಯಾಂಟ್ನಲ್ಲಿದೆ. ಬಂದು ತೆಗೆದುಕೊಳ್ಳಿ’ ಎಂದು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದರು’ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯೆ ಮೈತ್ರಿ ಆರೋಪಿಸಿದರು.
‘ನಾಗೇಶ್ ಅವರ ವರ್ತನೆಯನ್ನು ಸಂಘದ ಮುಖಂಡರ ಗಮನಕ್ಕೆ ತಂದೆವು. ಅವರ ಸೂಚನೆಯಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದೆವು. ಇದರಿಂದ ಸಿಟ್ಟಿಗೆದ್ದ ನಾಗೇಶ್ ಗುರುವಾರ ಕಾರ್ಮಿಕರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು’ ಎಂದು ಅವರು ದೂರಿದರು.
‘ಬಿಬಿಎಂಪಿಯ ಜಂಟಿ ನಿರ್ದೇಶಕರು(ಸಮಾಜ ಕಲ್ಯಾಣ) ಪತ್ರ ಬರೆದಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಇದನ್ನು ಕೆ.ಆರ್.ಪುರ ಉಪವಿಭಾಗದ ಎಸಿಪಿ ಅವರ ಗಮನಕ್ಕೆ ತಂದ ಬಳಿಕವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)ಕಾಯ್ದೆಯಡಿ ದೂರು ದಾಖಲಿಸಿಕೊಂಡರು. ಈಗ ಗುತ್ತಿಗೆದಾರ ತಲೆಮರೆಸಿಕೊಂಡಿದ್ದಾನೆ’ ಎಂದು ಮತ್ತೊಬ್ಬ ಪೌರಕಾರ್ಮಿಕರಾದ ಮಂಜುಳಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.