ಬೆಂಗಳೂರು: ‘ನಮ್ಮಲ್ಲಿ ಗೂಂಡಾ ಕಾಯ್ದೆ ಸರಿಯಾಗಿ ಉಪಯೋಗವಾಗುತ್ತಿಲ್ಲ. ರಾಜ್ಯದಲ್ಲಿ ವ್ಯಾಪಕವಾಗಿರುವ ಗೂಂಡಾ ಚಟುವಟಿಕೆಗಳನ್ನು ನಿಯಂತ್ರಿಸಲು ನಿರ್ದಾಕ್ಷಿಣ್ಯವಾಗಿ ಕಾಯ್ದೆಯನ್ನು ಬಳಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದೇನೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್ಕೆಸಿಸಿಐ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
‘ಪುಂಡಾಟಿಕೆ, ಗೂಂಡಾಗಿರಿ, ಮೀಟರ್ ಬಡ್ಡಿ ದಂಧೆಕೋರರನ್ನು ಮಟ್ಟ ಹಾಕಲು ಯಾವುದೇ ಮುಲಾಜು ನೋಡದೆ ಗೂಂಡಾ ಕಾಯ್ದೆ ಪ್ರಕಾರವೇ ಕ್ರಮಕೈಗೊಳ್ಳಿ ಎಂದಿದ್ದೇನೆ. ಪೊಲೀಸರು ಕಠಿಣವಾಗಿದ್ದರೆ ಆ ಭಾಗದಲ್ಲಿ ಅರ್ಧ ಅಪರಾಧ ಕಡಿಮೆಯಾಗುತ್ತದೆ’ ಎಂದು ಹೇಳಿದರು.
‘ಭಿಕ್ಷಾಟನೆ ನಗರಕ್ಕೆ ಒಂದು ಪಿಡುಗಾಗಿ ಕಾಡುತ್ತಿದೆ. ಅದನ್ನು ನಿಯಂತ್ರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈಗಾಗಲೇ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಿಕ್ಷಾಟನೆ ನಿಂತಿದೆ. ಸಾವರ್ಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ, ತಕ್ಷಣ ಕ್ರಮ ಕೈಗೊಳ್ಳುತ್ತಾರೆ’ ಎಂದರು.
ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ‘ಸೈಬರ್ ಅಪರಾಧಗಳ ಬಗ್ಗೆ ಇಲಾಖೆ ಹೆಚ್ಚು ಒತ್ತು ನೀಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾವಂತ ಯುವಕರು ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ, ಭಯೋತ್ಪಾದನಾಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಉನ್ನತ ತಂತ್ರಜ್ಞಾನಗಳ ಮೂಲಕ ಕಣ್ಗಾವಲು ಇಡಬೇಕು’ ಎಂದು ಒತ್ತಾಯಿಸಿದರು.
***
‘ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟಿಹಾಕಿ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ಹಾರೋಹಳ್ಳಿ ಠಾಣೆಗೆ 10 ಬಾರಿ ದೂರು ನೀಡಿದರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಮಾತನಾಡಲು ಠಾಣೆಗೆ ಹೋದರೆ ಇನ್ಸ್ಪೆಕ್ಟರ್ ಸಿಗುವುದೇ ಇಲ್ಲ’ ಎಂದು ಅಲ್ಲಿನ ಉದ್ಯಮಿಗಳು ಅಳಲು ತೋಡಿಕೊಂಡರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.