ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬಿಡುಗಡೆಗೊಳಿಸಿರುವ ರೇಖಾಚಿತ್ರದಲ್ಲಿರುವ ಶಂಕಿತ ಹಂತಕನ ಹಣೆಯಲ್ಲಿ ತಿಲಕ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ರೇಖಾಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಐಟಿ ಅಧಿಕಾರಿಗಳು, ‘ಹತ್ಯೆಗೂ ಮುನ್ನ ಅನುಮಾನಾಸ್ಪದ ವ್ಯಕ್ತಿಯೊಬ್ಬ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಅವರ ಮನೆಗೆ ಬಂದಿದ್ದ. ಆತ ತಿಲಕ ಇಟ್ಟುಕೊಂಡಿದ್ದ. ಅದೇ ಮಾಹಿತಿಯನ್ನು ಇಂದಿರಾ ಅವರು ನಮಗೆ ತಿಳಿಸಿದ್ದರು. ಅದರ ಆಧಾರದಲ್ಲಿ ಶಂಕಿತನ ಹಣೆಗೆ ತಿಲಕ ಇಟ್ಟಿದ್ದೇವೆ’ ಎಂದರು.
ರೇಖಾಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಪ್ರಭಾಕರ್ ನಾಯಕ್ ( ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಆಪ್ತ ಸಹಾಯಕ), ‘ನಾನು ಹಿಂದೂವಾಗಿದ್ದು, 18 ವರ್ಷದಿಂದ ತಿಲಕ ಇಟ್ಟುಕೊಳ್ಳುತ್ತಿದ್ದೇನೆ. ಎಸ್ಐಟಿ ಬಿಡುಗಡೆ ಮಾಡಿರುವ ಶಂಕಿತ ಹಂತಕನ ರೇಖಾಚಿತ್ರವು ನನ್ನನ್ನು ಹೋಲುತ್ತದೆ ಎಂದು ಹಲವರು ಕರೆ ಮಾಡಿ ವಿಚಾರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
‘ನನಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇನೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.