ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಬಂಧಿತ ಆರೋಪಿ ಕೆ.ಟಿ.ನವೀನ್ಕುಮಾರ್ ವಿರುದ್ಧ ಜಾರ್ಜ್ಶೀಟ್ ಸಿದ್ಧಪಡಿಸಿದೆ.
2017ರ ಸೆಪ್ಟೆಂಬರ್ 5ರಂದು ಗೌರಿ ಹತ್ಯೆ ನಡೆದಿತ್ತು. ಕೃತ್ಯದಲ್ಲಿ ನವೀನ್, ಆತನ ಇಬ್ಬರು ಸಹಚರರು ಹಾಗೂ ಇಬ್ಬರು ಶಾರ್ಪ್ಶೂಟರ್ಗಳು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆ ಕಲೆಹಾಕಿರುವ ಎಸ್ಐಟಿ, ಅದನ್ನೇ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಅದನ್ನು ಇನ್ನು 15 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
‘ಕೊಲೆಗೆ ಸಂಚು ರೂಪಿಸಿ, ಕಾರ್ಯಗತಗೊಳಿಸುವಲ್ಲಿ ನವೀನ್ ಮಹತ್ವದ ಪಾತ್ರ ನಿರ್ವಹಿಸಿದ್ದ. ಕೊಳ್ಳೆಗಾಲ ಹಾಗೂ ಸತ್ಯಮಂಗಲ ಅರಣ್ಯ ಪ್ರದೇಶಗಳಲ್ಲಿ ಸಹಚರರೊಂದಿಗೆ ಸಂಚಿನ ಬಗ್ಗೆ ಚರ್ಚೆ ನಡೆಸಿದ್ದ. ಇದನ್ನು ಆರೋಪಿಯೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
‘ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ಆರೋಪಿಗಳು, ಕೊಳ್ಳೆಗಾಲ ಅಥವಾ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಎಸೆದಿರುವ ಮಾಹಿತಿ ಇದೆ. ಅಲ್ಲೆಲ್ಲ ಹುಡುಕಾಟ ನಡೆಸುತ್ತಿದ್ದೇವೆ. ಆ ಬಗ್ಗೆಯೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಿದ್ದೇವೆ’.
‘ಹತ್ಯೆಗೂ ಮುನ್ನ ರಾಜರಾಜೇಶ್ವರಿನಗರದ ಗೌರಿ ಲಂಕೇಶ್ ಅವರ ಮನೆ ಬಳಿಯೇ ಓಡಾಡಿದ್ದ ನವೀನ್, ಅವರ ಚಲನವಲನಗಳನ್ನು ತಿಳಿದುಕೊಂಡಿದ್ದ. ಈ ಪ್ರಕರಣದಲ್ಲಿ ಅನುಮಾನದ ಮೇಲೆ 537 ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ್ದೆವು. ಅದರಿಂದ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೆಲ ಸಂಘಟನೆಗಳ ಮುಖಂಡರ ಮೊಬೈಲ್ ಸಂಭಾಷಣೆಯನ್ನೂ ಆಲಿಸುತ್ತಿದ್ದೆವು. ಆಗ ನವೀನ್, ಪ್ರೊ. ಕೆ.ಎಸ್. ಭಗವಾನ್ ಅವರನ್ನು ಕೊಲೆ ಮಾಡುವ ಬಗ್ಗೆ ಕೆಲವರೊಂದಿಗೆ ಮಾತನಾಡಿದ್ದು ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗೌರಿ ಹತ್ಯೆಯಲ್ಲಿ ಆತನ ಪಾತ್ರವಿರುವುದು ಖಚಿತವಾಯಿತು’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.