ADVERTISEMENT

ಗ್ರಾಹಕರಿಗೆ ಸೌಲಭ್ಯ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 20:30 IST
Last Updated 3 ಜೂನ್ 2013, 20:30 IST

ಪೀಣ್ಯ ದಾಸರಹಳ್ಳಿ:  ಬ್ಯಾಂಕಿನ ಸಿಬ್ಬಂದಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ, ಮಾದರಿಶಾಖೆಯನ್ನಾಗಿ ಮಾಡಬೇಕು ಎಂದು ಶಾಸಕ ಎಸ್.ಮುನಿರಾಜು ಸಲಹೆ ಮಾಡಿದರು.

ತುಮಕೂರು ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ಪ್ರಾರಂಭಿಸಿರುವ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ  ಮಾತನಾಡಿದರು.

ಬ್ಯಾಂಕಿನ ಸಿಬ್ಬಂದಿ ಶಿಸ್ತು ಸಂಯಮವನ್ನು ರೂಢಿಸಿಕೊಂಡು ಕರ್ತವ್ಯ ಮಾಡಬೇಕು ಎಂದರು. `ಪ್ರಸ್ತುತ ದಿನಗಳಲ್ಲಿ 10 ಎಕರೆ ಜಮೀನಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಕೆಳ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕಾದ ಅಗತ್ಯ ಇದೆ' ಎಂದು ಹೇಳಿದರು.

ಈಡಿಗ ಸಮಾಜದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಆರ್.ಎಲ್.ಜಾಲಪ್ಪ, ಮುಂತಾದವರು ಸಾಮಾಜಿಕ, ರಾಜಕೀಯವಾಗಿ ಜನಾಂಗಕ್ಕೆ ಸೇವೆ ಸಲ್ಲಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ಮಾತನಾಡಿ `ನಮ್ಮ ಸಮಾಜದ ಕೆಲವು ಹಿರಿಯರು ಸ್ಥಾಪಿಸಿದ ಬ್ಯಾಂಕ್ ಉತ್ತಮ ರೀತಿಯಲ್ಲಿ ನಡೆಯದಾದಾಗ ಡಿ.ದಾಸಪ್ಪ, ತಮ್ಮೇಗೌಡ ಅವರಂತಹ ಹಿರಿಯರು ನನ್ನನ್ನು ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಸೇರಿಸಿಕೊಂಡರು. ನಂತರ ಬ್ಯಾಂಕ್ ಆಡಳಿತದಲ್ಲಿ ಸುಧಾರಣೆ ತಂದೆವು. ಈಗ ಬ್ಯಾಂಕಿನಲ್ಲಿ ರೂ 175 ಕೋಟಿ ಠೇವಣಿ ಸಂಗ್ರಹವಾಗಿದ್ದು 8ನೇ ಶಾಖೆ ಬ್ಯಾಟರಾಯನಪುರದಲ್ಲಿ ಉದ್ಘಾಟನೆಗೊಳ್ಳಲಿದೆ' ಎಂದರು.

ಪಾಲಿಕೆ ಸದಸ್ಯೆ ಪುಟ್ಟಮ್ಮ ತಮ್ಮಣ್ಣ, ಬ್ಯಾಂಕಿನ ಉಪಾಧ್ಯಕ್ಷ ಎಂ.ತಿಮ್ಮೇಗೌಡ, ನಿರ್ದೇಶಕರಾದ ಜಿ.ಕೆ.ಓಬಯ್ಯ, ಕೆ.ಜಿ.ಹನುಮಂತರಾಜು, ಮುರಳೀಧರ, ಎ.ಆರ್.ರಾಮಯ್ಯ, ಎಂ.ಪಿ.ಹರಿಚರಣ್, ಶ್ರೀರಂಗ ವಿದ್ಯಾಸಂಸ್ಥೆಯ ರಮೇಶ್, ಜಿ.ಜಿ.ನಾಗರಾಜು, ಎ,ಮರಿಯಪ್ಪ ಇತರರು ಹಾಜರಿದ್ದರು. ಪ್ರಧಾನ ವ್ಯವಸ್ಥಾಪಕ ಟಿ.ಎಲ್. ಹನುಮಂತರಾಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.