ಬೆಂಗಳೂರು: ಶಾಂತಿನಗರ ಡಿಪೊದಲ್ಲಿ ಶುಕ್ರವಾರ ಬೆಳಿಗ್ಗೆ ಚಾಲಕ ಮತ್ತು ನಿರ್ವಾಹಕರಾದ ಸಲೀಂ (26) ಎಂಬ ಕಾಲ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ತೀವ್ರ ಗಾಯಗೊಂಡಿರುವ ಅವರು ಹಾಸ್ಮ್ಯಾಟ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ್ನಿಂದ ಬೆಳಿಗ್ಗೆ ನಗರಕ್ಕೆ ಬಂದ ಸಲೀಂ, ಡಿಪೊದ ನೀರಿನ ತೊಟ್ಟಿ ಬಳಿ ಮುಖ ತೊಳೆಯುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿಗೆ ಹೊರಟಿದ್ದ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು ಅವರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಕಾಲ ಮೇಲೆ ಬಸ್ನ ಚಕ್ರ ಹರಿದಿದೆ.
ಕೂಡಲೇ ಡಿಪೊದ ಇತರೆ ಸಿಬ್ಬಂದಿ ಸಲೀಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಸಲೀಂ ಅವರ ಎಡಗಾಲಿನ ತೊಡೆ ಭಾಗದ ಮೂಳೆ ಪುಡಿಪುಡಿಯಾಗಿದೆ. ಮಂಡಿಯ ಕೀಲು ಸಹ ತುಂಡಾಗಿದೆ. ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ಅಗತ್ಯತೆ ಬಗ್ಗೆ ಶನಿವಾರ ನಿರ್ಧರಿಸಲಾಗುವುದು’ ಎಂದು ಹಾಸ್ಮ್ಯಾಟ್ ಆಸ್ಪತ್ರೆ ವೈದ್ಯ ಅಜಿತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪತ್ನಿ ಹಾಗೂ ಐದು ತಿಂಗಳ ಮಗುವನ್ನು ನೋಡಲು ಬೀದರ್ಗೆ ಹೋಗಿದ್ದೆ. ಬೆಳಿಗ್ಗೆ 7.30ಕ್ಕೆ ವಾಪಸಾದ ನಾನು, ಕರ್ತವ್ಯಕ್ಕೆ ಹಾಜರಾಗಲು ಅಣಿಯಾಗುತ್ತಿದ್ದೆ. ಈ ವೇಳೆ ಬಸ್ ಏಕಾಏಕಿ ಮೈಮೇಲೆ ಎರಗಿತು.
ಚಾಲಕ ಡಿಪೊದಲ್ಲೇ ಇಷ್ಟು ಅಜಾಗರೂಕತೆ ತೋರಿದರೆ ರಸ್ತೆಗಳಲ್ಲಿ ಯಾವ ರೀತಿ ಕೆಲಸ ಮಾಡಬಹುದು’ ಎಂದು ಸಲೀಂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಮಾನತಿನಲ್ಲಿದ್ದ ಸಲೀಂ
ಸಲೀಂ ಅವರು ಇತ್ತೀಚೆಗೆ ಪ್ರಯಾಣಿಕರಿಂದ ಪ್ರಯಾಣ ದರ ಪಡೆದುಕೊಂಡು ಟಿಕೆಟ್ ನೀಡಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಅವರನ್ನು ಅಮಾನತಿನಲ್ಲಿ ಇರಿಸಿದ್ದರು. ಇದೇ ವಿಷಯವಾಗಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಸಲೀಂ ಡಿಪೊಗೆ ಬಂದಿದ್ದರು
– ಷಡಾಕ್ಷರಯ್ಯ,
ಶಾಂತಿನಗರ ಡಿಪೊ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.