ನೆಲಮಂಗಲ: ಬೆಳ್ಳಿ ಚಿನ್ನಾಭರಣ ಸಿದ್ಧಗೊಳಿಸುವವರೇ ಆಭರಣದ ಬೆಲೆ ನಿಗದಿಗೊಳಿಸುವಂತಾಗಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ವಿಶ್ವಕರ್ಮ ಸಂಘದ ವತಿಯಿಂದಲೇ ಚಿನ್ನಾಭರಣ ಅಂಗಡಿ ಪ್ರಾರಂಭಿಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಅಭಿಪ್ರಾಯಪಟ್ಟರು. ರಾಜ್ಯ ವಿಶ್ವಕರ್ಮ ಮಹಾಮಂಡಲದ ವತಿಯಿಂದ ಆದಿಚುಂಚನಗಿರಿ ಕಾಲೇಜು ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಾಗೃತಿ ಸಭೆ ಮತ್ತು ತಾಲ್ಲೂಕು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮತನಾಡಿದರು.
ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ.ಎಲ್. ಕೃಷ್ಣಪ್ಪ ಉದ್ಘಾಟಿಸಿದರು. ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮಾಜವನ್ನು ಬೆಳೆಸಲು ಸಂಘಟಿತ ಹೋರಾಟ ನಡೆಸಬೇಕು ಎಂದರು. ಪುರಸಭೆಯ ಉಪಾಧ್ಯಕ್ಷ ಎನ್.ಪಿ.ಹೇಮಂತ್ ಕುಮಾರ್ ಸಂಘದಿಂದ ಸಮುದಾಯ ಭವನ ನಿರ್ಮಿಸಲು ನಿವೇಶನ ಮಂಜೂರಾತಿಗೆ ಪ್ರಯತ್ನಿಸುವ ಭರವಸೆ ನೀಡಿದರು.
ಮಹಾಮಂಡಲದ ರಾಜ್ಯ ಅಧ್ಯಕ್ಷ ಎಲ್.ನಾಗರಾಜಾಚಾರ್ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ಪೀಠಾಧ್ಯಕ್ಷ ಶಿವಸುಜ್ಞಾನ ಮೂರ್ತಿ, ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿ.ಪಂ ಸದಸ್ಯ ಡಿ.ಸಿ.ವೇಣುಗೋಪಾಲ್, ಸಂಘದ ತಾಲ್ಲೂಕು ಅಧ್ಯಕ್ಷ ಎ.ಕೃಷ್ಣಪ್ಪ ವಿಶ್ವಕರ್ಮ ಮಾತನಾಡಿದರು. ಜಿ.ಪಂ ಸದಸ್ಯರಾದ ಬಿ.ಚಂದ್ರಪ್ಪ, ಎಂ.ಎನ್ ರಾಮ್ ಮಾಜಿ ಸದಸ್ಯ ಕುಮಾರಸ್ವಾಮಿ, ಪುರಸಭಾ ಸದಸ್ಯ ಬೆಳದಿಂಗಳ ಕೃಷ್ಣಮೂರ್ತಿ, ನಾಗೇಂದ್ರ ಕಮ್ಮಾರ್, ಅಶ್ವತ್ಥಾಚಾರ್. ಮಂಜುನಾಥ್ ವೇದೀಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.