ಬೆಂಗಳೂರು: `ಸಾಹಿತ್ಯ ಸೇವೆ ಹಾಗೂ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದ ನಡುವೆಯೂ ಆಳವಾದ ಶಾಂತಿಯನ್ನು ಕಾಯ್ದುಕೊಳ್ಳಲು ಚಿ.ಶ್ರೀನಿವಾಸರಾಜು ಅವರಿಗೆ ಸಾಧ್ಯವಾಗಿತ್ತು. ಎಲ್ಲರೂ ಅನುಸರಿಸಬೇಕಾದ ನಡೆಯಿದು' ಎಂದು ನಾಟಕಕಾರ ಕೆ.ವಿ.ನಾರಾಯಣ ಶ್ಲಾಘಿಸಿದರು.
ಸಂಸ ರಂಗಪತ್ರಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಂಗ ಪತ್ರಿಕೆಯ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಚಿ.ಶ್ರೀನಿವಾಸರಾಜು ನೆನಪಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಾಹಿತ್ಯಾಭಿರುಚಿಯನ್ನು ಯುವ ಜನತೆಯಲ್ಲಿ ಬಿತ್ತುವುದನ್ನು ಕರ್ತವ್ಯ ವೆಂದು ಭಾವಿಸಿದರೆ ಹೊರತು ಅದು ಅವರಿಗೆ ಎಂದೂ ಅಹಂನ ವಿಷಯವಾಗಿರಲಿಲ್ಲ.
ಬದುಕಿನುದ್ದಕ್ಕೂ ಮಾನವೀಯತೆಯ ಮಂತ್ರವನ್ನು ಜಪಿಸಿ, ಹಲವರಿಗೆ ಪ್ರೇರಣೆಯಾದ ಮಹಾನ್ ವ್ಯಕ್ತಿ' ಎಂದು ಬಣ್ಣಿಸಿದರು.
`ರಾಜಕೀಯ, ಸಾಮಾಜಿಕ ಎಲ್ಲ ವಿಚಾರಗಳ ಬಗ್ಗೆಯೂ ಸ್ವತಂತ್ರ ನಿಲುವು ಹೊಂದಿದ್ದ ಅವರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ , ಅವೆಲ್ಲವೂ ನಡೆಯಲ್ಲಿ ಜಾರಿಯಾಗುತ್ತಿದ್ದವು' ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ, `ಎಲ್ಲರಿಗೂ ಅಣ್ಣನಂತೆ ಮಾರ್ಗದರ್ಶನ ಮಾಡಿ, ಸದ್ದು ಮಾಡದೇ ಸಂತನಂತೆ ಬದುಕಿದರು' ಎಂದರು. ಚಿ.ಶ್ರೀನಿವಾಸರಾಜು ಕುರಿತ `ಅಂತರ್ಜಲ' ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.