ಬೆಂಗಳೂರು: ‘ಕಾದಂಬರಿ ಪ್ರಕಾರವು ಇಂದು ತನ್ನ ಚೌಕಟ್ಟಿನಲ್ಲಿ ಉಳಿದಿಲ್ಲ. ಕಾದಂಬರಿ ರಚನೆಯು ವಿಸ್ತಾರತೆ ಪಡೆದುಕೊಂಡಿದೆ’ ಎಂದು ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಪಾಂಚಜನ್ಯ ಪಬ್ಲಿಕೇಷನ್ಸ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕ ಜಕ್ಕಣಿಕ್ಕಿ ಎಂ.ದಯಾನಂದ ಅವರ ‘ನರಸಾಪುರ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ನರಸಾಪುರ ಕಾದಂಬರಿ ವಿಶೇಷ ಬರವಣಿಗೆಯಿಂದ ಕೂಡಿದೆ. ಕಾದಂಬರಿಯಲ್ಲಿ ಗ್ರಾಮ ಬದುಕಿನ ಕಥನವಿದೆ. ಕೃತಿಯಲ್ಲಿ ಹಳ್ಳಿಯ ಬದುಕು ಮಾತನಾಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ನಡವಳಿಕೆ ಹಾಗೂ ಆಗುಹೋಗುಗಳ ಕುರಿತ ಕಥನ ಇಲ್ಲಿದೆ’ ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಕುವೆಂಪು ಅವರ ಕೃತಿಗಳಲ್ಲಿ ಮದುಮಗಳಾಗಿದ್ದ ಮಲೆನಾಡು, ತೇಜಸ್ವಿ ಅವರ ಕಾಲಕ್ಕೆ ಬೆಲೆವೆಣ್ಣಾಗಿ ರೂಪ ಪಡೆಯುತ್ತದೆ. ಜಕ್ಕಣಿಕ್ಕಿ ಅವರ ಕಾಲಕ್ಕೆ ಮಲೆನಾಡು ಮುದುಕಿಯ ರೂಪ ಪಡೆದಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.