ADVERTISEMENT

ಜಮೀನು ಮಾರದಿರಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST
ಜಮೀನು ಮಾರದಿರಲು ಸಲಹೆ
ಜಮೀನು ಮಾರದಿರಲು ಸಲಹೆ   

ಯಲಹಂಕ: `ಕೃಷಿಕರ ಪರಿಸ್ಥಿತಿ ಈಗ ಗಂಭೀರವಾಗಿದ್ದು, ಕೃಷಿ ಭೂಮಿಗಳು ಮಾಯವಾಗುತ್ತಿವೆ. ರೈತರು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸಂಘಟಿತರಾಗಿ ಪರಿಹಾರ ಕಂಡುಕೊಳ್ಳಬೇಕು~ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬೆಂಗಳೂರು ಉತ್ತರ ತಾಲ್ಲೂಕು ಘಟಕದ ವತಿ ರಾಜಾನುಕುಂಟೆ-ಅರಕೆರೆ ಮಾರ್ಗದಲ್ಲಿರುವ ಸುಬ್ಬ ರಾಜು ಅವರ ತೋಟದಲ್ಲಿ ಶನಿವಾರ ನಡೆದ `ರೈತರ ಸ್ವಾಭಿಮಾನ ಶಿಬಿರ~ ಉದ್ಘಾಟಿಸಿ ಅವರು ಮಾತನಾಡಿದರು.

`ರೈತರು ತಮ್ಮ ಜಮೀನನ್ನು ಯಾವುದೇ ಕಾರಣಕ್ಕೂ ಪರಭಾರೆ ಅಥವಾ ಮಾರಾಟ ಮಾಡಬಾರದು. ಆ ಜಮೀನು ಮುಂದೆ ರೈತರ ಬದುಕಿಗೆ ಆಸರೆಯಾಗಲಿದೆ~ ಎಂದು ಅವರು ಕಿವಿಮಾತು ಹೇಳಿದರು.
`ರೈತರ ಜಮೀನು ಕಬಳಿಸಲು ಇಂದು ದೊಡ್ಡ ಜಾಲವೇ ಸಜ್ಜಾಗಿ ನಿಂತಿದೆ. ಕೆಐಎಡಿಬಿ ಮತ್ತಿತರ ಅಂಗಸಂಸ್ಥೆಗಳ ಮೂಲಕ ರೈತರ ಜಮೀನನ್ನು ಕಬಳಿಸಲು ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ತಂಡ ರಚಿಸಿಕೊಂಡಿದ್ದಾರೆ.

ಇಂತವರು ಹಳ್ಳಿಯ ಅಥವಾ ರೈತರ ಹಿತಾಸಕ್ತಿ ಕಾಪಾಡುವ ಬದಲು ಕೃಷಿಕರಿಗೆ ಮಾರಕವಾಗುವಂತಹ ದೊಡ್ಡ ಅಪಾಯಗಳನ್ನು ತಂದಿಡುತ್ತಿದ್ದಾರೆ~ ಎಂದು ದೂರಿದರು. ಸಿಐಟಿಯು ಮುಖಂಡ ಕೆ.ವಿ.ಗಂಗಣ್ಣ `ದುಡಿಯುವ ವರ್ಗಗಳ ಹೋರಾಟ ಮತ್ತು ಏಕತೆ~, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡ ಡಾ.ಶ್ರೀನಿವಾಸ್, `ಸರ್ಕಾರದ ಕೃಷಿ ನೀತಿ ಮತ್ತು ರೈತರು~ ವಿಷಯ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.