ಬೆಂಗಳೂರು: `ಆಪರೇಶನ್ ಸದ್ಭಾವನಾ~ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ರಾಮಪುರ ಜಿಲ್ಲೆಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 25 ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಕಾಶ್ಮೀರದಿಂದ ಬೆಂಗಳೂರಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಭಾರತೀಯ ಸೇನಾದಳದ ಉತ್ತರ ವಲಯದ ಪಿರ್ ಪಂಜಾಲ್ ಬ್ರಿಗೇಡ್ ಈ ಪ್ರವಾಸವನ್ನು ಆಯೋಜಿಸಿದೆ.
ಅಹಮದಾಬಾದ್ ಮತ್ತು ಮುಂಬೈಗೂ ಭೇಟಿ ನೀಡಿರುವ ವಿದ್ಯಾರ್ಥಿನಿಯರು ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರನ್ನು ಭೇಟಿ ಮಾಡಿದರು. ಭಾರತೀಯ ಸೇನೆಯ ಕರ್ನಾಟಕ ಮತ್ತು ಕೇರಳದ ಸಬ್ ಏರಿಯಾದ ಮೇಜರ್ ಜನರಲ್ ಎ.ಕೆ.ಪ್ರಧಾನ್, 106 ಇನ್ಫೆಂಟ್ರಿ ಬೆಟಾಲಿಯನ್ನ ಪ್ಯಾರಾಚ್ಚುಟ್ ದಳದ ತರಬೇತಿ ಕೇಂದ್ರ ಹಾಗೂ ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್)ನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ನಾಳೆ ಬೆಂಗಳೂರಿನ ಕೆಲವು ಪ್ರವಾಸಿ ತಾಣಗಳಿಗೆ ಮತ್ತು ಐಟಿ ಕಂಪೆನಿ ಇನ್ಫೋಸಿಸ್ ಸಂಸ್ಥೆಗೆ ಸಹ ಅವರು ಭೇಟಿ ನೀಡಲಿದ್ದಾರೆ.
ಕಾಶ್ಮೀರದ ಗಡಿ ಪ್ರದೇಶದಲ್ಲಿರುವ ಬಡ ಮಕ್ಕಳಿಗಾಗಿ ಆಯೋಜಿಸಿರುವ ಈ ಪ್ರವಾಸ ಹೊರ ಜಗತ್ತಿಗೆ ತೆರೆದುಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು, ಬೇರೆ-ಬೇರೆ ಸಂಸ್ಕೃತಿಯ ಅರಿವು ಮೂಡಿಸುವುದು ಮತ್ತು ಉನ್ನತ ಶಿಕ್ಷಣಕ್ಕೆ ಅವರನ್ನು ಪ್ರಚೋದಿಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ.
ಆರೋಗ್ಯ, ಶಿಕ್ಷಣ, ಔದ್ಯೋಗಿಕ ತರಬೇತಿ ಹಾಗೂ ಆರ್ಥಿಕ ಅಭಿವೃದ್ಧಿ ಮುಂತಾದ ಸಮಾಜಮುಖಿ ಯೋಜನೆಗಳ ಮೂಲಕ ಜಮ್ಮು ಕಾಶ್ಮೀರದ ಬಡಮಕ್ಕಳಿಗೆ ನೆರವು ನೀಡುವುದು ಸೇನೆ ಹಮ್ಮಿಕೊಂಡ ಈ ಸದ್ಭಾವನಾ ಯೋಜನೆಯ ಆಶಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.