ಬೆಂಗಳೂರು: ರಸ್ತೆ ವಿಸ್ತರಣೆಗಾಗಿ ಜಯಮಹಲ್ ರಸ್ತೆಯ 112 ಮರಗಳನ್ನು ಕಡಿಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸ್ತಾವಕ್ಕೆ ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿಗೆ ಈವರೆಗೆ ಸಾರ್ವಜನಿಕರಿಂದ 13,610 ಇಮೇಲ್ಗಳು ಬಂದಿವೆ.
ಮರಗಳನ್ನು ಕಡಿಯುವ ಬಗ್ಗೆ ಬಿಬಿಎಂಪಿ 10 ದಿನಗಳ ಹಿಂದೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು.
‘ಪ್ರತಿಕ್ರಿಯೆ ನೀಡಿರುವ ಹೆಚ್ಚಿನ ಜನರು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜನರ ಭಾವನೆಗಳನ್ನು ನಾವು ಗೌರವಿಸಬೇಕಿದೆ. ಈ ಮಾರ್ಗದುದ್ದಕ್ಕೂ 350ರಿಂದ 400 ಮರಗಳಿವೆ. ಈ ಎಲ್ಲ ಮರಗಳನ್ನು ನಾವು ಕಡಿಯುವುದಿಲ್ಲ. ರಸ್ತೆ ವಿಸ್ತರಣೆಗೆ ಅಡ್ಡಿ ಆಗಿರುವ ಮರಗಳನ್ನು ಮಾತ್ರ ಕಡಿಯುತ್ತೇವೆ. ರಸ್ತೆ ವಿಸ್ತರಣೆಗೆ ಅರಮನೆ ಮೈದಾನದ ಒಂದು ಪಾರ್ಶ್ವವನ್ನು ಬಳಸಿಕೊಳ್ಳುತ್ತೇವೆ’ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪೂ ರಾವ್ ತಿಳಿಸಿದರು.
ಜನರ ಪ್ರತಿರೋಧದ ಕಾರಣದಿಂದ 40 ಮರಗಳನ್ನು ಸ್ಥಳಾಂತರ ಮಾಡಲು ಬಿಬಿಎಂಪಿ ನಿರ್ಧರಿಸಿದೆ.