ರಾಜರಾಜೇಶ್ವರಿನಗರ: ದಲಿತ ಅಧಿಕಾರಿಯ ಜಾತಿ ನಿಂದನೆ ಮಾಡಿರುವ ಸಹಾಯಕ ಕಂದಾಯ ಅಧಿಕಾರಿ ಸಿ.ಲಿಂಗಯ್ಯ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಜಾಗೃತಿ ಸಮಿತಿ ಸದಸ್ಯರು ರಾಜರಾಜೇಶ್ವರಿನಗರದಲ್ಲಿ ಬಿಬಿಎಂಪಿ ವಲಯ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ದಲಿತ ಜಾಗೃತಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುಮೂರ್ತಿ ಮಾತನಾಡಿ, `ಕೆಂಗೇರಿ ಉಪವಲಯದ ಉಲ್ಲಾಳ ವಾರ್ಡ್ನ 130ರ ಕಂದಾಯ ಪರಿವೀಕ್ಷಕ ವಿ.ಎನ್.ಶಿವಣ್ಣ ಎಂಬವರಿಗೆ ಸಿ.ಲಿಂಗಯ್ಯ ಬೆದರಿಕೆ ಹಾಕಿದ್ದಾರೆ.
ಸೇವೆಯಿಂದ ಅಮಾನತು ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜೀವಬೆದರಿಕೆ ಹಾಕಿದ್ದಾರೆ. ಲಿಂಗಯ್ಯ ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು' ಎಂದು ಆಗ್ರಹಿಸಿದರು.
ಜಂಟಿ ಆಯುಕ್ತ ಎನ್.ಬಾಬಣ್ಣ ಮನವಿ ಸ್ವೀಕರಿಸಿ ಮಾತನಾಡಿ, `ಈ ಸಂಬಂಧ ಆಯುಕ್ತರಿಗೆ ಪತ್ರ ಬರೆದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ' ಎಂದು ಭರವಸೆ ನೀಡಿದರು. ಬಳಿಕ ಧರಣಿಯನ್ನು ಕೈಬಿಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.