ಬೆಂಗಳೂರು: ಜೆ.ಪಿ.ನಗರ ಬಳಿಯ ‘ಎಲ್ ಅಂಡ್ ಟಿ ಸೌತ್ ಸಿಟಿ’ ಅಪಾರ್ಟ್ ಮೆಂಟ್ನ 7ನೇ ಮಹಡಿಯಿಂದ ಹಾರಿ ಕಾರ್ತಿಕ್್ (17) ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
‘ಕಾರ್ತಿಕ್, ಸಾಫ್ಟ್ವೇರ್ ಉದ್ಯೋಗಿ ಶ್ರೀನಿವಾಸ್ ಹಾಗೂ ಉಮಾದೇವಿ ದಂಪತಿಯ ಪುತ್ರ. ರಾತ್ರಿ 7 ಗಂಟೆ ಸುಮಾ ರಿಗೆ ಆತ, ಕಟ್ಟಡದಿಂದ ಹಾರಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘ಮಗ ಕೆಲದಿನಗಳಿಂದ ಟ್ಯೂಷನ್ಗೆ ಹೋಗಿರಲಿಲ್ಲ. ಈ ಬಗ್ಗೆ ಶಿಕ್ಷಕರು ಕರೆ ಮಾಡಿ ತಿಳಿಸಿದ್ದರು. ಮಂಗಳವಾರ ಸಂಜೆಯೂ ಆತ, ಟ್ಯೂಷನ್ಗೆ ಹೋಗಲಿಲ್ಲ. ಹೀಗಾಗಿ, ಬೈದು ಬುದ್ಧಿ ಹೇಳಿದ್ದೆವು. ಅಷ್ಟಕ್ಕೆ ಸಿಟ್ಟಿನಿಂದ ಹೊರ ಹೋಗಿ ಮಹಡಿಯಿಂದ ಜಿಗಿದ’ ಎಂದು ಪೋಷಕರು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.
‘ಮೂಲತಃ ಆಂಧ್ರಪ್ರದೇಶದ ಶ್ರೀನಿವಾಸ್, ಮೂರು ವರ್ಷಗಳಿಂದ ಈ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ಕಾರ್ತಿಕ್ ಅವರ ಒಬ್ಬನೇ ಮಗನಾಗಿದ್ದ. ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.