ADVERTISEMENT

ಜ. 6ರಂದು ಕಾರ್ಮಿಕರ ಬಂದ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:02 IST
Last Updated 20 ಡಿಸೆಂಬರ್ 2013, 20:02 IST

ಬೆಂಗಳೂರು: ‘ಅನ್ನಭಾಗ್ಯ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ. 6ರಂದು ಬಂದ್‌ ನಡೆಸಲು ಉದ್ದೇಶಿಸಲಾಗಿದೆ’ ಎಂದು  ಕರ್ನಾಟಕ ರಾಜ್ಯ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವರದರಾಜೇಂದ್ರ ತಿಳಿಸಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಮಾಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ  ಸರಿಯಾದ ಕೂಲಿ, ಅಗತ್ಯ ಸೌಲಭ್ಯ ನೀಡದೆ ವಂಚಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಗೋದಾಮಿನಿಂದ ಪಡಿತರ ಅಂಗಡಿಗೆ 1 ಕ್ವಿಂಟಲ್‌ ಅಕ್ಕಿದ ಮೂಟೆಯನ್ನು  ಸಾಗಿಸಲು  ರೂ6 ನೀಡಲಾಗುತ್ತಿದೆ. ಈ ಅಲ್ಪ  ಹಣದಿಂದ ಕಾರ್ಮಿಕರ ಜೀವನ ನಿರ್ವಹಣೆ ಸಾಧ್ಯವಿಲ್ಲ. ಈ ಕುರಿತು ಕಳೆದ ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದರು.

ಅನ್ನಭಾಗ್ಯ ಯೋಜನೆ ಅಡಿ ಕೆಲಸ ಮಾಡುವ ಎಲ್ಲ ಹಮಾಲಿ ಕಾರ್ಮಿಕರಿಗೆ  ಆಹಾರ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡಿ ಸೇವಾ ಭದ್ರತೆ ಒದಗಿಸಬೇಕು, ಎಲ್ಲ ಹಮಾಲಿ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ ಸೌಲಭ್ಯವನ್ನು ಕಲ್ಪಿಸಬೇಕು, ಗೋದಾಮಿನಿಂದ ಪಡಿತರ ಅಂಗಡಿಗೆ  ಸಾಗಿಸುವ 1 ಕ್ವಿಂಟಲ್‌ ಮೂಟೆಗೆ ರೂ18 ನಿಗದಿಪಡಿಸಬೇಕು ಮತ್ತು ಈಗಿರುವ ಆಹಾರ ಧಾನ್ಯಗಳ ಸಾಗಾಣಿಕೆ ಪದ್ಧತಿಯು ಕಾರ್ಮಿಕ ವಿರೋಧಿ ಪದ್ಧತಿಯಾಗಿದ್ದು ಅದನ್ನು ರದ್ದುಪಡಿಸಿ ಕೇಂದ್ರೀಕೃತ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಹೇಳಿದರು.

ಈ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.