ADVERTISEMENT

ಟ್ಯಾಂಕರ್ ನೀರು ಪೂರೈಕೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 19:00 IST
Last Updated 5 ಆಗಸ್ಟ್ 2011, 19:00 IST

ಕೃಷ್ಣರಾಜಪುರ:  ಈ ಭಾಗದ ಬಡಾವಣೆ ನಿವಾಸಿಗಳ ಕೋರಿಕೆಯ ಮೇರೆಗೆ ಉಚಿತವಾಗಿ ಟ್ಯಾಂಕರಿನಲ್ಲಿ ನೀರು ಪೂರೈಸಲು ಕ್ರಮಗೊಳ್ಳಲಾಗಿದೆ ಎಂದು ಬಿಬಿಎಂಪಿ ಸದಸ್ಯ ಬೈರತಿ ಎನ್.ಬಸವರಾಜ್ ತಿಳಿಸಿದರು.

ಸತತ ಮಳೆಯಿಂದ ಮನೆ ಕುಸಿತಕ್ಕೆ ಒಳಗಾದ ಜ್ಯೋತಿಪುರದ ಸಂತ್ರಸ್ತರಿಗೆ ವಿಜಿನಾಪುರ ಸಮೀಪದ ದರ್ಗಾ ಮಹಲ್ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಛಾವಣಿ ಶೀಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

`ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 45ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಸ್ವಂತ ಖರ್ಚಿನಿಂದ ಕೊರೆಯಿಸಲಾಗಿದೆ. ಕೆಲವು ಕೊಳವೆ ಬಾವಿಗಳಲ್ಲಿ ನೀರು ಇಲ್ಲದಿರುವುದರಿಂದ ತುರ್ತು ಸಂದರ್ಭಗಳಲ್ಲಿ ನಿವಾಸಿಗಳ ಕೋರಿಕೆಯಂತೆ ನೀರು ಪೂರೈಸಲಾಗುತ್ತಿದೆ~ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಓದುತ್ತಿರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಸ್ಕೂಲು ಬ್ಯಾಗುಗಳನ್ನು ವಿತರಿಸಲಾಯಿತು.

ನಗರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಮಾನುಲ್ಲ ಮಾತನಾಡಿದರು. ಹಿಂದುಳಿದ ವರ್ಗಗಳ ಅಧ್ಯಕ್ಷ ದಾಮೋದರರಾಜು, ಮಹದೇವಪುರ ನಗರಸಭೆಯ ಮಾಜಿ ಅಧ್ಯಕ್ಷೆ ಲೋಕಮ್ಮ, ಮುಖಂಡರಾದ ಬಿ.ಕೃಷ್ಣಪ್ಪ, ಅಮರ್‌ಜಾನ್, ಸೂರ್ಯಪ್ರಕಾಶ್ ಮತ್ತಿತ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.