ಬೆಂಗಳೂರು: ರಾಜ್ಯ ವಿಧಾನಸಭಾ ಚುನಾಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದೆ, ಸರ್ಕಾರ ರಚಿಸಲು ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗಳು ಹರಿದಾಡುತ್ತಿವೆ.
103 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಬಿಜೆಪಿಗೆ ಶಾಕ್ ನೀಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಕುರಿತು ಹಾಸ್ಯಪ್ರಿಯರು ಪುಂಖಾನುಪುಂಖವಾಗಿ ವ್ಯಂಗ್ಯದ ಚಟಾಕಿ ಹಾರಿಸಿದ್ದಾರೆ.
ಟ್ರೋಲ್ ತೀರ್ಥಹಳ್ಳಿ ರೂಪಿಸಿರುವ ‘ನನ್ ಮಗನನ್ನು ಮುಖ್ಯಮಂತ್ರಿ ಮಾಡೋಕೆ ನೀವೆಲ್ಲಾ ಹೊಡ್ಕೊಂಡ್ ಸತ್ರಲ್ಲೊ...’ ಎಂದು ದೇವೇಗೌಡರು ಯೋಚಿಸುತ್ತಿರುವ ಚಿತ್ರ ವಾಟ್ಸಾಪ್ಗಳಲ್ಲಿ ಹರಿದಾಡುತ್ತಿದೆ.
‘ಡಿಸ್ಟಿಂಕ್ಷನ್ ಪಡೆದವನಿಗಿಂತ, 35 ಅಂಕ ಪಡೆದವನೇ ಖುಷಿಯಾಗಿರುತ್ತಾನೆ ಎನ್ನುವುದನ್ನು ಸಮಯ ಮತ್ತೊಮ್ಮೆ ಸಾಬೀತು ಮಾಡಿದೆ’ ಎಂದು ಜೆಡಿಎಸ್ನ ಕುಮಾರಸ್ವಾಮಿಯನ್ನು ವ್ಯಂಗ್ಯ ಮಾಡಿದ್ದಾರೆ.
‘ನಮ್ಮ ಮಂದಿಗೆ ತಲಿ ಕೆಟ್ರ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಅನ್ನೇ ಬದಲಸ್ತಾರ.. ಇನ್ನು ಸರ್ಕಾರ ಯಾವ ಲೆಕ್ಕ’ ಎಂದು ಹಾಸ್ಯ ಮಾಡುವ ಮೀಮ್ಗಳು ರೂಪುಕೊಂಡಿವೆ.
‘ಸೋತವರೆಲ್ಲ ಒಂದಾಗಿ ಅಧಿಕಾರಕ್ಕೆ ಬರೋದಾದ್ರೆ ಚುನಾವಣೆ ಯಾಕ್ರೊ... ಟಾಸ್ ಹಾಕಿ ಅಧಿಕಾರ ಕೊಟ್ಬಿಡಿ’ ಎಂದು ರಂಗಾಯಣ ರಘು ಕೇಳುತ್ತಿರುವ ಚಿತ್ರ ಫೇಸ್ಬುಕ್ನಲ್ಲಿ ಸಾಕಷ್ಟು ಲೈಕ್ಗಳನ್ನು ಪಡೆದುಕೊಂಡಿದೆ.
ಇನ್ನು ಚುನಾವಣೆ ಹಾಗೂ ಐಪಿಎಲ್ ಅನ್ನು ತಳಕು ಹಾಕಿ ‘ಯಡಿಯೂರಪ್ಪ ಈ ಸಲ ಸರ್ಕಾರ ನಮ್ದೆ ಎನ್ನುವುದು... ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೆ ಎನ್ನುವುದು...ಎರಡು ಕನಸು’ ಎಂದು ಟ್ರೋಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.