ADVERTISEMENT

ಡಬ್ಬಾವಾಲಾಗಳಿಂದ ಸಂಘಟಿತ ದುಡಿಮೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST
ಡಬ್ಬಾವಾಲಾಗಳಿಂದ ಸಂಘಟಿತ ದುಡಿಮೆ
ಡಬ್ಬಾವಾಲಾಗಳಿಂದ ಸಂಘಟಿತ ದುಡಿಮೆ   

ಬೆಂಗಳೂರು: `ಮುಂಬೈ ಡಬ್ಬಾವಾಲಾಗಳು ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಊಟದ ಡಬ್ಬಿಗಳನ್ನು ಯಾವುದೇ ಅಡೆತಡೆ ಇಲ್ಲದೆ ಮನೆಗಳಿಂದ ಕಚೇರಿಗಳಿಗೆ ಸಾಗಿಸುತ್ತಾರೆ. ಇವರು ಇತರ ನಗರಗಳಲ್ಲಿ ಕಾಣಸಿಗುವುದಿಲ್ಲ. ಅವರ ಮೌಲ್ಯ ಮತ್ತು ಮನಸ್ಥಿತಿ ಸಮಾನವಾದುದು~ ಎಂದು ಮುಂಬೈ ಡಬ್ಬಾವಾಲಾ ಸಂಘಟನೆಯ ಕಾರ್ಯನಿರ್ವಹಣಾಧಿಕಾರಿ ಡಾ. ಪವನ್ ಅಗರವಾಲ್ ತಿಳಿಸಿದರು.

ನಗರದ ಆದರ್ಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ `ಉದ್ಯಮಶೀಲತೆ ಮತ್ತು ಭವಿಷ್ಯದ ಮ್ಯಾನೇಜ್‌ಮೆಂಟ್ ಸಿದ್ಧಾಂತಗಳು~ ಕುರಿತು ಅವರು ಇತ್ತೀಚೆಗೆ ಉಪನ್ಯಾಸ ನೀಡಿದರು.
`ಡಬ್ಬಾವಾಲಾಗಳು ಸಂಘಟಿತ ದುಡಿಮೆಯಿಂದ ಯಶಸ್ಸು ಸಾಧಿಸಿದ್ದಾರೆ. ಇದಕ್ಕೆ ಯಾವುದೇ ಪ್ರತಿಭೆ ಬೇಕಿಲ್ಲ.
 
ಸಾಮಾನ್ಯ ಜ್ಞಾನ ಇದ್ದರೆ ಸಾಕು. ಸಂಘಟನಾ ಮನೋಭಾವ ಇಲ್ಲದಿರುತ್ತಿದ್ದರೆ ಸಿಕ್ಸ್ ಸಿಗ್ಮಾ ಗೌರವ ಸಿಗುತ್ತಿರಲಿಲ್ಲ. 1890ರಲ್ಲಿ ಒಂದು ಡಬ್ಬಿ, ಒಬ್ಬ ಗ್ರಾಹಕರಿಂದ ಈ ಸೇವೆ ಆರಂಭವಾಯಿತು. ನಂತರ ಕೌಟುಂಬಿಕ ಉದ್ದಿಮೆ ಸಾಮಾಜಿಕ ಸ್ವರೂಪ ಪಡೆದು ಬೆಳೆಯಿತು~ ಎಂದರು.

ಅತ್ಯುತ್ತಮ ಆಡಳಿತ ನಿರ್ವಹಣೆ, ಇವತ್ತಿನ ವೇಗದ ಬೆಳವಣಿಗೆಯ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಹೇಗೆ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಡಬ್ಬಾವಾಲಾಗಳ ಆಡಳಿತ ನಿರ್ವಹಣೆ ವೈಖರಿಯು ಆಧುನಿಕ ವ್ಯವಸ್ಥೆಯಲ್ಲಿ ಯಾವ ರೀತಿಯಲ್ಲಿ ಸ್ಪಂದಿಸಿದೆ ಹಾಗೂ ಯಶಸ್ವಿಯಾಗಿದೆ ಎಂದರು.

ಆದರ್ಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ವಿ. ಪ್ರೇಮ್‌ರಾಜ್ ಜೈನ್ ಮಾತನಾಡಿ, `ಡಬ್ಬಾವಾಲಾಗಳು ಸ್ವಾಯತ್ತತೆ, ಉತ್ತರದಾಯಿತ್ವದ ಸಂಕೇತವಾಗಿದ್ದಾರೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಕಲಿಯಬೇಕಾದುದು ಸಾಕಷ್ಟಿದೆ ಎಂದರು.

`ಡಬ್ಬಾವಾಲಾಗಳಿಂದ ಸಮಯಪ್ರಜ್ಞೆಯನ್ನು ಕಲಿತುಕೊಳ್ಳಬಹುದು. ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನ ಬಳಸದೆಯೇ ಅವರು ಅದ್ಭುತ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಅಲ್ಪ ಅಕ್ಷರಜ್ಞಾನ ಇರುವವರು. ಆದರೂ ಬುತ್ತಿಗಳ ಸಂಕೇತ ನಾಮಗಳನ್ನು ಸರಿಯಾಗಿ ಬಲ್ಲವರು. ವಿದ್ಯಾರ್ಥಿಗಳು ಈ ಕೌಶಲದ ಯಶಸ್ಸಿನಿಂದ ಪ್ರೇರಿತರಾಗಬೇಕು~ ಎಂದು ಅವರು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.