ಬೆಂಗಳೂರು: `ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದಲೇ ಲೇಖಕಿಯಾಗಿ ಗುರುತಿಸಿಕೊಂಡ ಡಾ.ಅನುಪಮಾ ನಿರಂಜನ ಅವರು ಎಲ್ಲ ಯುವ ಲೇಖಕಿಯರಿಗೆ ಸ್ಫೂರ್ತಿ~ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಶ್ಲಾಘಿಸಿದರು.
ಕನ್ನಡ ಸಂಘರ್ಷ ಸಮಿತಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಅನುಪಮಾ ನಿರಂಜನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಮಹಿಳೆಯರು ನಿರಂತರ ಕಲಿಕೆ ಮತ್ತು ಪ್ರಸ್ತುತ ವಿದ್ಯಮಾನಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು.
ಆಧುನಿಕ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡಾಗ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಸಾಧನೆಗೆ ಮುಂದಡಿ ಇಡಬಹುದು~ ಎಂದು ಹೇಳಿದರು. `ವಿಮರ್ಶಾ ಜಗತ್ತಿಗೆ ಅಂಜದೇ ಮಹಿಳೆಯರು ಆತ್ಮತೃಪ್ತಿಗಾಗಿ ಬರವಣಿಗೆಯನ್ನು ಆರಂಭಿಸಬೇಕು.ಆಗ ಮಾತ್ರ ಸೃಜನಶೀಲತೆಯೆಂಬುದು ಬರಹಗಳಲ್ಲಿ ಪಡಿಮೂಡುತ್ತದೆ~ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕಿ ಕುಲಶೇಖರಿ, ` ಅನುಪಮಾ ಅಂತಹ ಹಿರಿಯಕ್ಕ ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ಮತ್ತು ಭಾಷೆಯ ಬಗ್ಗೆ ಅಪಾರ ತಿಳಿದುಕೊಳ್ಳಲು ಸಾಧ್ಯವಾಯಿತು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಸಂತಸವಾಗಿದೆ~ ಎಂದು ಹೇಳಿದರು.
ಲೇಖಕಿ ರಾಣಿ ಗೋವಿಂದರಾಜು, ಸಮಿತಿಯ ಸಂಚಾಲಕಿ ಗಾಯತ್ರಿ ರಾಮಣ್ಣ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.