ಬೆಂಗಳೂರು: ‘ನನ್ನ ಮಗಳು ನಜ್ಮಾ, (ಐದು ವರ್ಷ) ತೀವ್ರತರದ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೇ ಈ ಭಾಗದಲ್ಲಿ ಅಂಗನವಾಡಿಯ ಕೊರತೆಯಿರುವುದರಿಂದ, ಅವಳನ್ನು ಅಂಗನವಾಡಿಗೆ ಸೇರಿಸಲು ಸಾಧ್ಯವಾಗಿಲ್ಲ’ ಎಂದು ಗಾರ್ಮೆಂಟ್ ಉದ್ಯೋಗಿ ಹಫೀಸಾ ಅಳಲು ತೋಡಿಕೊಂಡರು.
ದೇವರಜೀವನಹಳ್ಳಿಯಲ್ಲಿ ಗುರುವಾರ ನಡೆದ ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಡ ನಿವಾಸಿಗಳ ಕತೆಯಿದು.
ಪ್ರಾಥಮಿಕ ಹಂತದ ಚಿಕಿತ್ಸೆಗೆ ವೈದ್ಯರ ಕೊರತೆ, ಅಮಾನವೀಯ ವರ್ತನೆ ತೋರುವ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಭ್ರಷ್ಟಾಚಾರ, ಅಂಗನವಾಡಿಯ ಕೊರತೆ, ಅಂಗವಿಕಲರ ಪಿಂಚಣಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರು ದೂರು ಸಲ್ಲಿಸಿದರು.
ಡಿ.ಜೆ.ಹಳ್ಳಿಯ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರು ಮನುಷ್ಯತ್ವವೇ ಇಲ್ಲದ ಮಗೃಗಳಂತೆ ವರ್ತಿಸುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ಹೆರಿಗೆ ಮಾಡಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳುತ್ತಾರೆ ಎಂದು ಕೌಸರ್ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ವೈದ್ಯರ ಕೊರತೆ ಎದುರಾಗಿದೆ. ಸದ್ಯದಲ್ಲೇ ವೈದ್ಯರ ಕಾಯಂ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ, ‘ದೇವರಜೀವನಹಳ್ಳಿ ಎಂದರೆ ದೇವರೇ ಗತಿ ಹಳ್ಳಿ ಎಂಬಂತಾಗಿದೆ. ನಿವಾಸಿಗಳು ಅನಾರೋಗ್ಯ ಬಾರದಂತೆ ಮುಂಜಾಗ್ರತೆ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.