
ಬೆಂಗಳೂರು: ` ಕನ್ನಡ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಡಿ.ವಿ.ಗುಂಡಪ್ಪ ಅವರ ತತ್ವಗಳು ಸದಾ ಅನುಕರಣೀಯ~ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದರು.
ಹಂಸಜ್ಯೋತಿ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಡಿ.ವಿ.ಗುಂಡಪ್ಪ ಅವರ 125ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
`ಗುಂಡಪ್ಪ ಅವರು ಸಾಹಿತ್ಯ, ಸಂಗೀತ ಮತ್ತು ಪತ್ರಿಕಾ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಮಂಕುತಿಮ್ಮನ ಕಗ್ಗದ ಮೂಲಕ ಇಡೀ ಸಾಹಿತ್ಯವಲಯದಲ್ಲಿ ದಾರ್ಶನಿಕ ಕವಿಯಾಗಿ ಬೆಳೆದಿದ್ದಾರೆ. ಕಗ್ಗದ ಪ್ರತಿಯೊಂದು ಸಾಲು ಜೀವನಾಮೃತವನ್ನು ನೀಡುತ್ತದೆ~ ಎಂದು ಹೇಳಿದರು.
` ಗುಂಡಪ್ಪ ಅವರ ತತ್ವಗಳು ಮತ್ತು ಚಿಂತನೆಗಳು ಜನರನ್ನು ಜೀವನ ಮುಖಿಯಾಗಿಸುತ್ತವೆ. ಬಡತನದಲ್ಲೂ ಗುಂಡಪ್ಪ ಅವರು ವಿವಿಧ ರಂಗಗಳಲ್ಲಿ ಪಡೆದುಕೊಂಡ ವಿದ್ವತ್ತು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ~ ಎಂದರು.
ಗಾಂಧಿ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ, `ಗಾಂಧೀಜಿಯವರನ್ನು ಮೊದಲ ಬಾರಿಗೆ ಬೆಂಗಳೂರಿಗೆ ಕರೆತಂದವರಲ್ಲಿ ಗುಂಡಪ್ಪರೇ ಪ್ರಮುಖರು. ಅವರಿಗಿದ್ದ ವಾಕ್ಚಾತುರ್ಯ ಮತ್ತು ವಿದ್ವತ್ತು ಎಂತಹವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು~ ಎಂದು ನೆನಪಿಸಿಕೊಂಡರು.
ಎ.ವಿ.ಸೂರ್ಯನಾರಾಯಣ ರಾವ್, ಎಚ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ಕೆ.ದೇವಾನಂದ ಉಪಾಧ್ಯಯ, ಕೆ.ಈಶ್ವರ್ ಪ್ರಸಾದ್, ಎಂ.ವೆಂಕಟೇಶ್ ಅವರಿಗೆ `ಹಂಸ ಸಮ್ಮಾನ್~ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.