ಬೆಂಗಳೂರು: ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ಗಳನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಭರವಸೆ ನೀಡಿದರು.
ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ಕೇಂದ್ರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಿಸಿಸಿ ಬ್ಯಾಂಕ್ಗಳ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸಹಕಾರ ಇಲಾಖೆಯಲ್ಲಿ ಅಪೆಕ್ಸ್ ಬ್ಯಾಂಕ್ ಪಾತ್ರ ಮಹತ್ವದ್ದಾಗಿದೆ. ಡಿಸಿಸಿ ಬ್ಯಾಂಕ್ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವುದು. ಸರ್ಕಾರದ ಸೌಲಭ್ಯಗಳನ್ನು ವಿಳಂಬ ಮಾಡದಂತೆ ತಲುಪಿಸುವ ಮೂಲಕ ಡಿಸಿಸಿ ಬ್ಯಾಂಕ್ಗಳನ್ನು ಬಲಿಷ್ಠಗೊಳಿಸಲಾಗುವುದು' ಎಂದು ಅವರು ಹೇಳಿದರು.
`ಡಿಸಿಸಿ ಬ್ಯಾಂಕ್ಗಳಿಗೆ ನೀಡುತ್ತಿರುವ ಬಡ್ಡಿ ಸಹಾಯಧನದ ಮೊತ್ತವು ಕಡಿಮೆಯಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗುವುದು' ಎಂದು ಅವರು ತಿಳಿಸಿದರು.
ಪರಿಶೀಲನೆ: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ರೈತರಿಗೆ ನೇರವಾಗಿ ಸಹಾಯಧನ ನೀಡುವಂತೆ ಬೆಳೆ ಸಾಲ ಬಡ್ಡಿ ಸಹಾಯ ಧನವನ್ನು ರೈತರಿಗೆ ನೇರವಾಗಿ ತಲುಪಿಸಬೇಕೆಂಬ ಸಲಹೆ ಸಭೆಯಲ್ಲಿ ಕೇಳಿಬಂದಾಗ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವರು ಸ್ಪಷ್ಟಪಡಿಸಿದರು.
ಮೊದಲಿಗೆ ಮಾತನಾಡಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, `ಸಹಕಾರ ಬ್ಯಾಂಕ್ಗಳಿಗೆ ಬಾಕಿಯಿರುವ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಬೆಳೆ ಸಾಲದ ಮೇಲಿನ ಬಡ್ಡಿ ಸಹಾಯಧನ ಬಹಳ ಕಡಿಮೆಯಾಗಿದ್ದು ಇದರಿಂದಾಗಿ ಡಿಸಿಸಿ ಬ್ಯಾಂಕ್ಗಳು ಸಂಕಷ್ಟಕ್ಕೆ ಸಿಲುಕಿವೆ. ಸಹಾಯಧನ ಹೆಚ್ಚಳ ಮಾಡಬೇಕು. ಮಧ್ಯಮಾವಧಿ ಸಾಲದ ಬಡ್ಡಿ ಸಹಾಯಧನವನ್ನು ಹೆಚ್ಚಿಸಬೇಕು' ಎಂದು ಕೋರಿದರು.
ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಕೃಷ್ಣರಾವ್ ಮೊದಲಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.