ADVERTISEMENT

ತಾಲ್ಲೂಕಿನಲ್ಲಿ 5 ಶಾದಿ ಮಹಲ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಹೊಸಕೋಟೆ: `ಮುಸ್ಲಿಂ ಸಮುದಾಯದವರ ಅನುಕೂಲಕ್ಕಾಗಿ ತಾಲ್ಲೂಕಿನ  5 ಕಡೆ ಶಾದಿ ಮಹಲ್‌ಗಳನ್ನು ನಿರ್ಮಿಸಲಾಗುವುದು~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಸ್ಲಿಮರ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ 370 ಕೋಟಿ ರೂ ನೀಡಿದೆ. ಅಲ್ಲದೆ ಅವರಿಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗಿದ್ದು ಬಿಜೆಪಿ ಸರ್ಕಾರದ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಬೇಕಿದೆ.
 
ಎಲ್ಲ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ.ಏಜಾಜುದ್ದೀನ್ ಮಾತನಾಡಿ, `ಎಲ್ಲ ಧರ್ಮದ ಸಾರವೂ ಒಂದೇ ಆಗಿದ್ದು ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಗುರು ಹಿರಿಯರನ್ನು ಗೌರವಿಸುವುದರ ಮೂಲಕ ಶಾಂತಿ, ಸೌಹಾರ್ದದಿಂದ ಜೀವನ ನಡೆಸಬೇಕು~ ಎಂದರು.

ಜಾಮಿಯ ಮಸೀದಿ ಅಧ್ಯಕ್ಷ ಅಬ್ದುಲ್‌ವಾಜೀದ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಖದೀರ್ ಅಹಮದ್‌ಷಾ ಆಶೀರ್ವಚನ ನೀಡಿದರು. ಟೌನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಇಮ್ತಿಯಾಜ್‌ಪಾಷ, ಅಮೀರ್‌ಸಾಬ್, ವಿವಿಧ ಮಸೀದಿಗಳ ಅಧ್ಯಕ್ಷರು, ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಸಭೆ: ನಟ ಕರಿಬಸವಯ್ಯ ಅವರ ನಿಧನಕ್ಕೆ ತಾಲ್ಲೂಕು ಜನಪದರ ಸಾಂಸ್ಕೃತಿಕ ವೇದಿಕೆ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿತು. ಚಿತ್ರನಟ ಎಂ.ಎನ್. ಸುರೇಶ್, ಸಾಹಿತಿ ಬಾಲಗುರುಮೂರ್ತಿ, ವೇದಿಕೆ ಅಧ್ಯಕ್ಷ ಪಾಪಣ್ಣ ಇತರರು ಕರಿಬಸವಯ್ಯ ಅವರ ಗುಣಗಾನ ಮಾಡಿದರು.

ಕಳವು: ಕೋಲಾರ ರಸ್ತೆಯ ಹಲಸಳ್ಳಿಗೇಟ್ ಬಳಿ ನಿಲ್ಲಿಸಿದ್ದ ಕಂಟೈನರ್ ಲಾರಿಯ ಬೀಗ ಮುರಿದು ಅದರಲ್ಲಿದ್ದ 38 ಸಿದ್ಧಉಡುಪುಗಳ ಪೆಟ್ಟಿಗೆಗಳನ್ನು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಇದರ ಬೆಲೆ ಸುಮಾರು 3.80 ಲಕ್ಷ ರೂಗಳು ಎಂದು ಸದರನ್ ಲಾರಿ ಕಂಪನಿಯ ಸುರೇಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿದ್ಧ ಉಡುಪುಗಳನ್ನು ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.