ADVERTISEMENT

ತಾಳೆ ಹಣ್ಣು ಖರೀದಿಗೆ ಸರ್ಕಾರ ಯತ್ನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಬೆಂಗಳೂರು: ರಾಜ್ಯದಲ್ಲಿ ತಾಳೆ ಬೆಳೆಯುವ ಬೆಳೆಗಾರರಿಂದ ಕ್ವಿಂಟಲ್‌ಗೆ ಎಂಟು ಸಾವಿರ ರೂಪಾಯಿ ದರದಂತೆ ತಾಳೆ ಹಣ್ಣನ್ನು ಖರೀದಿಸಲು ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ತೋಟಗಾರಿಕಾ ಸಚಿವ ಎಸ್.ಎ. ರವೀಂದ್ರನಾಥ್ ಶನಿವಾರ ಇಲ್ಲಿ ಭರವಸೆ ನೀಡಿದರು.

ತೋಟಗಾರಿಕಾ ಇಲಾಖೆಯು ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2011-12ನೇ ಸಾಲಿನಲ್ಲಿ ಅಧಿಕ ಇಳುವರಿ ಪಡೆದ ತಾಳೆ ಬೆಳೆ ರೈತರನ್ನು ಸನ್ಮಾನಿಸಿದ ನಂತರ ಅವರು ಮಾತನಾಡಿದರು.

ಪ್ರಸ್ತುತ ರಾಜ್ಯ ಸರ್ಕಾರ ಕೆ.ಜಿ. ತಾಳೆ ಹಣ್ಣನ್ನು ಏಳು ರೂಪಾಯಿ ದರದಲ್ಲಿ ಖರೀದಿಸುತ್ತಿದೆ. ಈ ಮೊತ್ತವನ್ನು ಎಂಟು ರೂಪಾಯಿಗಳಿಗೆ ಹೆಚ್ಚಿಸಬೇಕೆಂಬುದು ಬೆಳೆಗಾರರ ಬೇಡಿಕೆ. ಈ ಬಾರಿಯ ಬಜೆಟ್‌ನಲ್ಲಿ ಇಲಾಖೆಗೆ 1ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದೇನೆ.

ನಿರೀಕ್ಷಿತ ಅನುದಾನ ದೊರೆತಲ್ಲಿ ಕ್ವಿಂಟಲ್ ತಾಳೆ ಹಣ್ಣನ್ನು ಎಂಟು ಸಾವಿರ ರೂಪಾಯಿಗಳಿಗೆ ಖರೀದಿಸಲು ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಸಚಿವರು ಆಶ್ವಾಸನೆ ನೀಡಿದರು.

ಅಂತರರಾಷ್ಟ್ರೀಯ ಕಚ್ಚಾ ಖಾದ್ಯ ತೈಲ ಬೆಲೆಯ ಆಧಾರದಲ್ಲಿ ಪ್ರತಿ ತಿಂಗಳು ತಾಳೆ ಹಣ್ಣಿನ ಬೆಲೆಯನ್ನು ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಬೆಲೆ ನಿಗದಿ ಸಮಿತಿಯು ನಿಗದಿಪಡಿಸಲಿದೆ. ಪ್ರತಿ ತಿಂಗಳು ಬೆಲೆಯಲ್ಲಿ ಏರು-ಪೇರಾಗಲಿರುವುದರಿಂದ ಶಾಶ್ವತ ಬೆಲೆ ನಿಗದಿಪಡಿಸಲು ಅಸಾಧ್ಯ ಎಂದು ಸ್ಪಷ್ಟಪಡಿಸಿದರು.

ಅತ್ಯುತ್ತಮ ಇಳುವರಿ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕುಂದರಗಿ ಗ್ರಾಮದ ಪ್ರಗತಿಪರ ರೈತ ಪುರುಷೋತ್ತಮ ನಾಡಗೌಡ, ಮೈಸೂರು ಜಿಲ್ಲೆಯ ಮರ್ಸೆ ಗ್ರಾಮದ ಸುಮಾ ಕುಮಾರ್ ಹಾಗೂ ಅಧಿಕ ಇಳುವರಿ ಪಡೆದ 30 ಮಂದಿ ತಾಳೆ ಬೆಳೆಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಆರಗ ಜ್ಞಾನೇಂದ್ರ, ಶಾಸಕ ಡಾ.ಡಿ. ಹೇಮಚಂದ್ರಸಾಗರ್ ಮಾತನಾಡಿದರು. ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ನಿರ್ದೇಶಕಿ ಪಿ. ಹೇಮಲತಾ, ಹೆಚ್ಚುವರಿ ನಿರ್ದೇಶಕ ಡಾ.ಡಿ.ಎಲ್. ಮಹೇಶ್ವರ್ ಉಪಸ್ಥಿತರಿದ್ದರು.

ರಾಜ್ಯದ ಕೃಷಿಗೆ ಕೆಆರ್‌ಎಸ್ ನೀರು ಸಾಕು!

ಇಸ್ರೇಲ್‌ನ ಹನಿ ನೀರಾವರಿ, ಕೃಷಿ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡಲ್ಲಿ ಕೆಆರ್‌ಎಸ್ ನೀರು ಇಡೀ ರಾಜ್ಯದ ಕೃಷಿಗೆ ಸಾಕಾಗಬಹುದು. ಒಂದು ಲೀಟರ್ ನೀರನ್ನು 26 ಪೈಸೆಗೆ ಖರೀದಿಸಿ ಕೃಷಿ ಮಾಡುವ ಅಲ್ಲಿನ ರೈತರು, ಒಂದೇ ಒಂದು ಹನಿ ನೀರನ್ನು ಪೋಲು ಮಾಡುವುದಿಲ್ಲ

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಇಸ್ರೇಲ್ ಪ್ರವಾಸ ಕೈಗೊಂಡು ರಾಜ್ಯಕ್ಕೆ ವಾಪಸ್ಸಾದ ಬಳಿಕ ಕೊಪ್ಪಳ ಜಿಲ್ಲೆಯ ಕೃಷಿಕ ದೇವೇಂದ್ರಪ್ಪ ಬಳೂಟಗಿ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ.
ಇಸ್ರೇಲ್ ರೈತರು ಹವಾಮಾನ ಮುನ್ಸೂಚನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ನೋಡಿಕೊಂಡು ಬೆಳೆ ಬೆಳೆಯುತ್ತಾರೆ.

ಯಾವುದೇ ಬೆಳೆ ಬೆಳೆಯುವುದಕ್ಕೆ ಮೊದಲೇ ಯೋಜನೆ ಹಾಕಿಕೊಳ್ಳುತ್ತಾರೆ. ಅದು ನಮಗೂ-ಇಸ್ರೇಲ್ ರೈತರಿಗೂ ಇರುವ ವ್ಯತ್ಯಾಸ. ನಮ್ಮಲ್ಲಿ ಎಲ್ಲ ಸಂಪನ್ಮೂಲಗಳಿದ್ದರೂ ಯೋಜನೆ ಹಾಕಿಕೊಂಡು ಬೆಳೆ ಬೆಳೆಯುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಅವರು ಹೇಳಿದರು.

ಕೃಷಿ ತಂತ್ರಜ್ಞಾನ ಬಳಕೆ ಮೆಚ್ಚುವಂಥದ್ದು: ಇಸ್ರೇಲ್‌ನ ಕೃಷಿ ತಂತ್ರಜ್ಞಾನ ಮೆಚ್ಚುವಂಥದ್ದು. ಯಾಂತ್ರಿಕ ತಂತ್ರಜ್ಞಾನಕ್ಕೆ ಅಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. 200 ಎಕರೆ ಜಮೀನನ್ನು ಐದು ಮಂದಿ ಕಾರ್ಮಿಕರು ನಿರ್ವಹಣೆ ಮಾಡುತ್ತಾರೆ. ಅಲ್ಲಿನ ತಂತ್ರಜ್ಞಾನವನ್ನು ನಮ್ಮ ಬೆಳೆಗಾರರಿಗೂ ಸರ್ಕಾರ ಒದಗಿಸಿದಲ್ಲಿ ಕರ್ನಾಟಕ ಪ್ರಗತಿಪರ ರಾಜ್ಯವಾಗಿ ಹೊರಹೊಮ್ಮಬಹುದು ಎಂದು ಬಾಗಲಕೋಟೆ ಜಿಲ್ಲೆಯ ರವಿಶಂಕರ್ ಊದುಗಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

2011-12ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 120 ರೈತರನ್ನು ವಿದೇಶ ಪ್ರವಾಸಕ್ಕೆ ಕಳಿಸಲು ನಿರ್ಧರಿಸಿದ್ದು, 30 ರೈತರ ಮೊದಲ ತಂಡ ಮಾರ್ಚ್ 8ರಂದು ಇಸ್ರೇಲ್ ಪ್ರವಾಸ ಕೈಗೊಂಡು 16ರಂದು ರಾಜ್ಯಕ್ಕೆ ವಾಪಸ್ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.