ಬೆಂಗಳೂರು: ತಾವು ತುಂಡುಡುಗೆ ತೊಟ್ಟಿದ್ದನ್ನು ಪ್ರಶ್ನಿಸಿದ ಕಾನ್ಸ್ಟೆಬಲ್ಗಳ ವಿರುದ್ಧ ಯುವತಿಯೊಬ್ಬರು ಫೇಸ್ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳು ಕೆಂಗೇರಿ ಇನ್ಸ್ಪೆಕ್ಟರ್ಗೆ ಸೂಚಿಸಿದ್ದಾರೆ.
‘ಶುಕ್ರವಾರ ರಾತ್ರಿ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಸಮೀಪದ ಲಸ್ಸಿ ಶಾಪ್ ಬಳಿ ಕುಳಿತಿದ್ದೆ. ಆಗ ಅಲ್ಲಿಗೆ ಬಂದ ಇಬ್ಬರು ಕಾನ್ಸ್ಟೆಬಲ್ಗಳು, ‘ತುಂಡುಬಟ್ಟೆ ಹಾಕಿಕೊಂಡು ರಸ್ತೆಗೆ ಬಂದಿದ್ದೀಯಲ್ಲ, ನಿನಗೆ ನಾಚಿಕೆ ಆಗಲ್ವ? ನಿಮ್ಮನ್ನು ಕಾಯುವುದೇ ನಮ್ಮ ಕೆಲಸ ಎಂದುಕೊಂಡಿದ್ದೀಯಾ’ ಎಂದು ಮುಜುಗರವಾಗುವ ರೀತಿಯಲ್ಲಿ ಮಾತನಾಡಿದರು’ ಎಂದು ಯುವತಿ ದೂರಿದ್ದಾರೆ.
‘ಜೋರಾಗಿ ಕೂಗಾಡುತ್ತಿದ್ದ ಅವರಿಗೆ, ನನ್ನ ಮಾತುಗಳನ್ನು ಕೇಳುವ ತಾಳ್ಮೆಯೂ ಇರಲಿಲ್ಲ. ಲಾಠಿ ಹಿಡಿದು ಎಲ್ಲರನ್ನೂ ಅಲ್ಲಿಂದ ಓಡಿಸಿದರು. ಪೊಲೀಸರೇ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುತ್ತಿರುವಾಗ ‘ಬೆಂಗಳೂರು ಸುರಕ್ಷಿತ’ ಎಂಬ ಭಾವನೆ ಎಲ್ಲಿಂದ ಮೂಡುತ್ತದೆ. ಇಂಥ ಕೆಟ್ಟ ಅನುಭವ ಇನ್ನೆಂದೂ ನನ್ನ ಜೀವನದಲ್ಲಿ ಬಾರದಿರಲಿ’ ಎಂದೂ ಬರೆದುಕೊಂಡಿದ್ದಾರೆ.
ಸಂತ್ರಸ್ತೆ ತಮ್ಮ ದೂರನ್ನು ಬೆಂಗಳೂರು ಪೊಲೀಸರ ಫೇಸ್ಬುಕ್ ಪೇಜ್ಗೆ ಟ್ಯಾಗ್ ಮಾಡಿದ್ದು, ‘ನಿಮ್ಮ ದೂರನ್ನು ಪರಿಶೀಲಿಸುವಂತೆ ಕೆಂಗೇರಿ ಇನ್ಸ್ಪೆಕ್ಟರ್ಗೆ ಹೇಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
‘ಹೆಣ್ಣು ಮಕ್ಕಳು ಸ್ಕರ್ಟ್, ಪ್ಯಾಂಟ್, ಶಾರ್ಟ್ ಏನೂ ಬೇಕಾದರೂ ಹಾಕಿಕೊಂಡು ಓಡಾಡಲಿ. ಅದನ್ನು ಕಟ್ಟಿಕೊಂಡು ನಿಮಗೇನು ಆಗಬೇಕು’ ಎಂದು ಫೇಸ್ಬುಕ್ ಬಳಕೆದಾರರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.