ADVERTISEMENT

ದಂತ ಚಿಕಿತ್ಸಾಲಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 18:55 IST
Last Updated 9 ಜನವರಿ 2012, 18:55 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಂತಿನಗರ ಹೆರಿಗೆ ಆಸ್ಪತ್ರೆಯಲ್ಲಿ ಬಿಬಿಎಂಪಿ, ಒಕ್ಕಲಿಗ ಸಂಘ ದಂತ ಮಹಾವಿದ್ಯಾಲಯ ಹಾಗೂ ಜೆ.ಪಿ.ನಗರದ ಲಯನ್ಸ್ ಸಂಸ್ಥೆ ಜಂಟಿಯಾಗಿ ಆರಂಭಿಸಿರುವ ದಂತ ಚಿಕಿತ್ಸಾಲಯ ಸೋಮವಾರ ಮೇಯರ್ ಶಾರದಮ್ಮ ಉದ್ಘಾಟಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ಶಾರದಮ್ಮ, `ಒಕ್ಕಲಿಗ ಸಂಘ ದಂತ ಮಹಾವಿದ್ಯಾಲಯ ಮತ್ತು ಜೆ.ಪಿ.ನಗರದ ಲಯನ್ಸ್ ಸಂಸ್ಥೆ ಸಹಭಾಗಿತ್ವದಲ್ಲಿ ಶಾಂತಿನಗರದ ಹೆರಿಗೆ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾಲಯವನ್ನು ಪ್ರಾರಂಭಿಸಿರುವುದು ಸಂತೋಷದ ವಿಷಯ. ಆಸ್ಪತ್ರೆಯಲ್ಲಿ ವಾರದಲ್ಲಿ ಐದು ದಿನ ಬಡಜನರಿಗೆ ಹಾಗೂ ಹಿರಿಯ ನಾಗರಿಕರಿಗೆ ನುರಿತ ವೈದ್ಯರಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ~ ಎಂದರು.

`ಆಸ್ಪತ್ರೆಗೆ ಅವಶ್ಯವಿರುವ ಮೂಲ ಸೌಲಭ್ಯಗಳನ್ನು ನೀಡಲು ಪಾಲಿಕೆಯು ಸದಾ ಸಿದ್ದವಿದೆ. ನಗರದ ಬಡ ಜನರು ಇದರ ಸಂಪೂರ್ಣ ಲಾಭ ಪಡೆದು ಶೀಘ್ರವಾಗಿ ಗುಣಮುಖರಾಗಲಿ. ಬಡಜನರಿಗೆ ಸೇವೆ ಸಲ್ಲಿಸಲು ಮುಂದೆ ಬರುವ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಉಚಿತ ಸೇವೆ ನೀಡಲು ಪಾಲಿಕೆ ಸಿದ್ಧವಿರುತ್ತದೆ~ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್, `ನಗರದಲ್ಲಿ ಅತಿ ಹೆಚ್ಚು ಕಂದಾಯ ತಮ್ಮ ವಿಧಾನಸಭಾ ಕ್ಷೇತ್ರದಿಂದ ಪಾಲಿಕೆಗೆ ಪಾವತಿಯಾಗುತ್ತಿದೆ. ನಗರದ ವಿವಿಧ ಕಡೆಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ತಮ್ಮ ಕ್ಷೇತ್ರದಲ್ಲಿಯೂ ಕೈಗೊಳ್ಳಲು ಬಿಬಿಎಂಪಿ ಮುಂದಾಗಬೇಕು. ಪಾಲಿಕೆಯ ಶಾಂತಿನಗರ ಹೆರಿಗೆ ಆಸ್ಪತ್ರೆಯಲ್ಲಿ ಸಿಜೇರಿಯನ್ ಸೌಲಭ್ಯವಿಲ್ಲದಿರುವುದರಿಂದ ಬಡ ಮಹಿಳೆಯರಿಗೆ ತುಂಬಾ ಕಷ್ಟವಾಗುತ್ತಿದೆ. ಶೀಘ್ರವೇ ಆಸ್ಪತ್ರೆಯಲ್ಲಿ ಸಿಜೆರಿಯನ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಉಪ ಮೇಯರ್ ಎಸ್. ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎನ್. ಗೀತಾ ಶಶಿಕುಮಾರ್, ಪಾಲಿಕೆ ಸದಸ್ಯೆ ಪಿ. ಸೌಮ್ಯ ಶಿವಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ, ಲಯನ್ಸ್ ಸಂಸ್ಥೆಯ ಕೆ.ಎಂ. ಮಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.