ADVERTISEMENT

ದರೋಡೆ, ಸುಲಿಗೆ, ಕಳವು: 1.88 ಕೋಟಿ ಆಭರಣ, ವಾಹನ ವಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: ದರೋಡೆ, ಸುಲಿಗೆ, ಕಳವು ಮುಂತಾದ 214 ಅಪರಾಧ ಪ್ರಕರಣ  ಗಳನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು ರೂ 1.88 ಕೋಟಿ ಮೌಲ್ಯದ ಆಭರಣ ಹಾಗೂ ವಾಹನ   ಗಳನ್ನು ವಶಪಡಿಸಿಕೊಂಡಿದ್ದಾರೆ.

  `ಎರಡು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಒಟ್ಟು 89 ಆರೋಪಿಗಳನ್ನು ಬಂಧಿಸಿದ್ದಾರೆ. ವಿವಿಧ ಪ್ರಕರಣ ಗಳಿಗೆ ಸಂಬಂಧಿಸಿದಂತೆ ನಾಲ್ಕು ಕೆ.ಜಿ ಚಿನ್ನಾಭರಣ, 6.5 ಕೆಜಿ ಬೆಳ್ಳಿ ವಸ್ತುಗಳು, 41 ದ್ವಿಚಕ್ರ ವಾಹನ, ಐದು ಕಾರು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಎಂಟು ದರೋಡೆ, ಹದಿನಾರು ಸರಗಳ್ಳತನ, ಇಪ್ಪತ್ತೆರಡು ಕಳವು, ನಲವತ್ತೊಂದು ದ್ವಿಚಕ್ರ ವಾಹನ ಕಳವು, 68 ಇತರೆ ಪ್ರಕರಣಗಳು ಪತ್ತೆಯಾಗಿವೆ. ಅತ್ಯುತ್ತಮ ಕೆಲಸ ಮಾಡಿರುವ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ~ ಎಂದರು.

`ಎಚ್‌ಎಎಲ್ ಠಾಣೆ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿ ವಾಹನ ಕಳವು, ಕಳವು ಮುಂತಾದ ಹತ್ತೊಂಬತ್ತು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಒಟ್ಟು ರೂ 14.60 ಲಕ್ಷ ಮೌಲ್ಯದ ಆಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜುನಾಥ ಎಂಬಾತನನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಹನ್ನೊಂದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ~ ಎಂದು ಮಿರ್ಜಿ ತಿಳಿಸಿದರು.

`ವಿವಾಹವಾಗುವುದಾಗಿ ಯುವತಿಯರಿಗೆ ನಂಬಿಸಿ ಅವರ ನಗ್ನ ಚಿತ್ರ ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ವಿಜಾಪುರದ ಬಸವರಾಜ ಗಾಯಕ್‌ವಾಡ್ (24) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಎಸ್ಸೆಸ್ಸೆಲ್ಸಿ ಅನುತ್ತೀರ್ಣನಾಗಿದ್ದ ಆತ ಸಿನಿಮಾ ನಟ ಎಂದು ವೆಂಕಟಾಪುರದ ಯುವತಿಯೊಬ್ಬರಿಗೆ ನಂಬಿಸಿದ್ದ. ವಿವಾಹವಾಗುವುದಾಗಿ ನಂಬಿಸಿ ಆ ಯುವತಿಯ ನಗ್ನ ಚಿತ್ರ ತೆಗದಿದ್ದ ಆತ 150 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ ಸುಲಿಗೆ ಮಾಡಿ ಪುಣೆಗೆ ಪರಾರಿಯಾಗಿದ್ದ~ ಎಂದು ಇನ್‌ಸ್ಪೆಕ್ಟರ್ ಪುರುಷೋತ್ತಮ್        ತಿಳಿಸಿದ್ದಾರೆ.

  ಆಗ್ನೇಯ ವಿಭಾಗದ ಡಿಸಿಪಿ ಡಾ.ಹರ್ಷ ಎಸಿಪಿಗಳಾದ ಆರ್.ಅಶೋಕ್, ಡಿ.ರಾಚಪ್ಪ, ಸುಬ್ಬಣ್ಣ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸಿ.ಬಾಲ ಕೃಷ್ಣ, ಎಂ.ಡಿ.ಬಾಬು, ಮಹಮ್ಮದ್ ರಫೀಕ್, ಶ್ರೀನಿವಾಸ ರೆಡ್ಡಿ, ಪ್ರೇಮಸಾಯಿ ಗುಂಡಪ್ಪ ರೈ, ಸುಧೀರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

  ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.