ಬೆಂಗಳೂರು: ವಕೀಲರು, ಪೊಲೀಸರು ಹಾಗೂ ಮಾಧ್ಯಮಗಳ ನಡುವೆ ಇದೇ 2ರಂದು ನಗರ ಸಿವಿಲ್ ಕೋರ್ಟ್ನಲ್ಲಿ ನಡೆದಿರುವ ಜಟಾಪಟಿಗೆ ಸಂಬಂಧಿಸಿದಂತೆ ವಕೀಲರ ಬಳಿ ಇರುವ ಎಲ್ಲ ದಾಖಲೆಗಳನ್ನು ಹಾಜರು ಪಡಿಸುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ವಕೀಲರು ಸಲ್ಲಿಸಿರುವ ಆರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಪೊಲೀಸರ ವಿರುದ್ಧ ಕ್ರಮಕ್ಕೆ ಕೋರಿರುವ ಅವರು, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಆದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಇತರ ಪ್ರತಿವಾದಿಗಳಿಗೆ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.
ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದೇ ಸಿಬಿಐ ತನಿಖೆಗೆ ಒಪ್ಪಿಸಲು ಆದೇಶಿಸುವಂತೆ ಒಂದು ಅರ್ಜಿಯಲ್ಲಿ ಕೋರಲಾಗಿದೆ.
ಘಟನೆಗೆ ಪೊಲೀಸರು ಹಾಗೂ ಮಾಧ್ಯಮಗಳು ಕಾರಣ ಎನ್ನುವುದು ಅರ್ಜಿದಾರ ವಕೀಲರ ವಾದ. ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳು ತಮ್ಮ ವಾಹನಗಳನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸುವ ಕಾರಣ, ವಕೀಲರಿಗೆ ಹೋಗಲು ಸ್ಥಳದ ಅಭಾವ ಉಂಟಾಗುತ್ತಿದೆ. ಘಟನೆ ನಡೆದ ದಿನ ಕೂಡ ಇದೇ ರೀತಿಯಾಗಿತ್ತು. ಆದುದರಿಂದ ವಕೀಲರು ಹಾಗೂ ಮಾಧ್ಯಮದವರ ನಡುವೆ ಗಲಾಟೆ ಉಂಟಾಯಿತು. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಪೊಲೀಸರು ಹದ್ದುಮೀರಿ ಕೋರ್ಟ್ ಆವರಣದೊಳಕ್ಕೆ ನುಗ್ಗಿದರು ಎಂದು ಅವರು ಆರೋಪಿಸಿದ್ದಾರೆ.
ಅದೇ ರೀತಿ ಘಟನೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಮೃತರಾಗಿರುವುದಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುಳ್ಳು ವರದಿ ಬಿತ್ತರಿಸಿದವು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎನ್ನುವುದು ಅವರ ವಾದ.
ಈ ಘಟನೆಯನ್ನು ನಿಯಂತ್ರಿಸಲು ವಿಫಲರಾದ ಡಿಜಿಪಿ ಶಂಕರ ಬಿದರಿ ಹಾಗೂ ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಬೇರೆಡೆ ವರ್ಗಾವಣೆ ಮಾಡಲು ಆದೇಶಿಸುವಂತೆ, ಪರಿಸ್ಥಿತಿ ವಿಕೋಪಕ್ಕೆ ಹೋದರೂ ಯಾವುದೇ ಕ್ರಮ ತೆಗೆದುಕೊಳ್ಳದ ಗೃಹ ಸಚಿವ ಆರ್.ಅಶೋಕ ಅವರ ರಾಜೀನಾಮೆ ಪಡೆಯಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ವಕೀಲರು ನಿರಪರಾಧಿಗಳು ಎಂಬ ಬಗ್ಗೆ ತಮ್ಮ ಬಳಿ ಭಾವಚಿತ್ರ, ವಿಡಿಯೊ ಸೇರಿದಂತೆ ಕೆಲವು ದಾಖಲೆಗಳು ಇರುವ ಬಗ್ಗೆ ಅರ್ಜಿದಾರರು ತಿಳಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ಹಾಜರು ಪಡಿಸಲು ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.