ಬೆಂಗಳೂರು: ನಗರದಲ್ಲಿ ದೀಪಾವಳಿ ಹಲವರಿಗೆ ಬೆಳಕಿನ ಹಬ್ಬವಾದರೆ ನಿರ್ಲಕ್ಷ್ಯದಿಂದ ಪಟಾಕಿ ಹೊಡೆದ ಕೆಲವು ಮಕ್ಕಳಿಗೆ ಕತ್ತಲುಮಯವಾಗಿದ್ದು, ಒಟ್ಟು 24 ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಂಗಳವಾರ ಮತ್ತು ಬುಧವಾರ ಪಟಾಕಿ ಸಿಡಿತದಿಂದ ಗಾಯಗೊಂಡು ಒಟ್ಟು 15 ಮಕ್ಕಳು ನಾರಾಯಣ ನೇತ್ರಾಲಯದ ಐದು ಶಾಖೆಗಳಲ್ಲಿ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 9 ಮಂದಿ ಚಿಕಿತ್ಸೆಗೊಳಗಾದರು.
ಬನ್ನೇರುಘಟ್ಟ ರಸ್ತೆಯ ಬಿಸ್ಮಿಲ್ಲಾ ನಗರದ ನಿವಾಸಿ ಮಿಜಾನ್ ಪಾಷಾ (7), ಕಾರ್ತಿಕ್ (8), ಶಾಂತಮ್ಮ (48) ಹಾಗೂ ಅಮಲಾ (32) ಅವರು ಮಿಂಟೋ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಕಣ್ಣು ಕಳೆದುಕೊಳ್ಳುವಷ್ಟರ ಮಟ್ಟಿಗೆ ಇವರಿಗೆ ಗಾಯಗಳಾಗಿಲ್ಲ. ಸಣ್ಣ-ಪುಟ್ಟ ಗಾಯಗಳಿಗೆ ಒಳಗಾದ ಐದು ಮಕ್ಕಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ.ಶಿವಪ್ರಸಾದ್ ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.
`ಎರಡು ದಿನಗಳ ಅವಧಿಯಲ್ಲಿ, ಪಟಾಕಿ ಸಿಡಿತದಿಂದ ಕಣ್ಣಿನ ತೊಂದರೆಗೆ ಒಳಗಾದ 15 ಮಂದಿಗೆ ಹೊರರೋಗಿಗಳಾಗಿಯೇ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡವರಲ್ಲಿ ಶೇ 80ರಷ್ಟು ಮಕ್ಕಳು~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗಶೆಟ್ಟಿ ತಿಳಿಸಿದರು.
ಕೆನ್ನೆ ಮತ್ತು ಕಣ್ಣಿನ ಪೊರೆಗೆ ಗಾಯವಾಗಿದ್ದ ಸೂರ್ಯಕಿರಣ (11) ಎಂಬ ಬಾಲಕನಿಗೆ ಇದೇ ಆಸ್ಪತ್ರೆಯ ರಾಜಾಜಿನಗರದ ಶಾಖೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಪ ಪ್ರಮಾಣದ ಕಣ್ಣಿನ ತೊಂದರೆಗೆ ಒಳಗಾದ 14 ಮಂದಿಗೆ ಹೊರರೋಗಿಗಳಾಗಿಯೇ ಚಿಕಿತ್ಸೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.