ADVERTISEMENT

ದೊರೆಸ್ವಾಮಿಗೆ ಮಾನವತಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 19:47 IST
Last Updated 10 ಡಿಸೆಂಬರ್ 2017, 19:47 IST
ಎಚ್. ಎಸ್. ದೊರೆಸ್ವಾಮಿ ಅವರಿಗೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಮಠದ ಧರ್ಮದರ್ಶಿ ಕೆ.ಜಿ.ನಾಗರಾಜಪ್ಪ, ಸಿದ್ದನಗೌಡ ಪಾಟೀಲ್, ಲೀಲಾ ಸಂಪಿಗೆ, ಎಚ್.ಎನ್. ನಾಗಮೋಹನದಾಸ್ ಇದ್ದಾರೆ –ಪ್ರಜಾವಾಣಿ ಚಿತ್ರ
ಎಚ್. ಎಸ್. ದೊರೆಸ್ವಾಮಿ ಅವರಿಗೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಮಠದ ಧರ್ಮದರ್ಶಿ ಕೆ.ಜಿ.ನಾಗರಾಜಪ್ಪ, ಸಿದ್ದನಗೌಡ ಪಾಟೀಲ್, ಲೀಲಾ ಸಂಪಿಗೆ, ಎಚ್.ಎನ್. ನಾಗಮೋಹನದಾಸ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಿಡುಮಾಮಿಡಿ ಮಹಾ ಸಂಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಅವರಿಗೆ ಮಾನವತಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರಗಳಾಗಿ ಹೊರಹೊಮ್ಮಲು ಹಲವು ರಾಷ್ಟ್ರಗಳು ಅನೈತಿಕ ಪೈಪೋಟಿಗೆ ಇಳಿದಿವೆ. ಪ್ರಬಲ ರಾಷ್ಟ್ರಗಳಿಂದಲೇ ಇಂದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸರ್ವಾಧಿಕಾರಕ್ಕಾಗಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿವೆ’ ಎಂದರು.

’ಕೋಮುವಾದ, ಉಗ್ರವಾದದಿಂದ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಉಗ್ರರು ಭಾರತವನ್ನು ಪ್ರಯೋಗಶಾಲೆ ಮಾಡಿಕೊಳ್ಳಲು ಹೊರಟಿದ್ದಾರೆ. ಕೋಮುವಾದ, ಉಗ್ರವಾದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ದೇಶದ ಪ್ರಗತಿಗೆ, ಪ್ರಜಾಪ್ರಭುತ್ವಕ್ಕೆ ದೊಡ್ಡ ಕಂಟಕ’ ಎಂದರು.

ADVERTISEMENT

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌, ‘ನಾವು ಎಷ್ಟು ಆಹಾರ ತಿನ್ನಬೇಕು ಎಂಬ ಬಗ್ಗೆ ಕೋಮುವಾದಿಗಳು ತಮ್ಮದೇ ಕಾನೂನು ಮಾಡುತ್ತಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ನಾವು ಸಮರ್ಥವಾಗಿ ವಿರೋಧಿಸುತ್ತಿಲ್ಲ’ ಎಂದರು.

‘ಜಗತ್ತಿನಲ್ಲಿ ಹಿಂಸೆ, ಕ್ರೌರ್ಯ, ದಬ್ಬಾಳಿಕೆಯನ್ನು ಹಿಮ್ಮೆಟ್ಟಲು ಮಾನವ ಹಕ್ಕುಗಳೂ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿವೆ’ ಎಂದು ತಿಳಿಸಿದರು.

ಎಚ್‌. ಎಸ್‌. ದೊರೆಸ್ವಾಮಿ, ‘ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆ ಶುದ್ಧವಾಗಿಲ್ಲ, ಯಾವ ಪಕ್ಷಗಳಿಗೂ ಜನಪರ ಕಾಳಜಿ ಇಲ್ಲ. ಅಧಿಕಾರಿಗಳಿಗೆ ಮಾನವೀಯತೆ ಇಲ್ಲ. ಇದರ ವಿರುದ್ಧ ವಿಚಾರ ಕ್ರಾಂತಿಯ ಬೀಜ ಬಿತ್ತುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು. ಈ ಪ್ರಶಸ್ತಿ ₹50 ಸಾವಿರ ಹಾಗೂ ಫಲಕ ಒಳಗೊಂಡಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.