ADVERTISEMENT

ದೌರ್ಜನ್ಯ ಎದುರಿಸಲು ಜಾಣ್ಮೆ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬೆಂಗಳೂರು: ಹೆಣ್ಣೆಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಲ್ಲುವ ಪ್ರಕರಣಗಳಿಂದ ಮಹಿಳಾ ವಿಮೋಚನೆ ಮತ್ತು ಮಹಿಳಾ ಸಬಲೀಕರಣವೆಂಬುದು ಪ್ರಾಯೋಗಿಕವಾಗಿ ದೂರವೇ ಉಳಿದಿದೆ ಎಂಬುದು ವೇದ್ಯವಾಗುತ್ತದೆ ಎಂದು ಸಾಹಿತಿ ಭಾಗ್ಯಲಕ್ಷ್ಮಿ ಮಗ್ಗೆ ಅಭಿಪ್ರಾಯಪಟ್ಟರು.

ಕನ್ನಡ ಯುವಜನ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಹಿಳಾ ವಿಮೋಚನೆ ಬಗ್ಗೆ ಒಂದು ಚಿಂತನೆ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೀಸಲಾತಿ ಬಯಸುವ ಸ್ತ್ರೀಸಂಕುಲವು ಕುಟುಂಬ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಬೇಕು. ಸಮಾಜದಲ್ಲಿನ ವಿಚ್ಛೇದಿತ, ಅವಿವಾಹಿತೆ ಹಾಗೂ ವಿಧವೆಯರ ಅಭಿವೃದ್ಧಿಗಾಗಿ ಮಹಿಳಾ ಸಂಘಟನೆಗಳು ಒಂದುಗೂಡಿ ಹೋರಾಡಬೇಕು~ ಎಂದರು.

`ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುವ ಬದಲು ಆಕೆಯನ್ನು ಗಂಡಿನ ಸರಿಸಮವೆಂದು ಪರಿಗಣಿಸಿ ಗೌರವಿಸಬೇಕಾಗಿರುವುದು ಸಮಾಜದ ಆದ್ಯ ಕರ್ತವ್ಯ. ಅಶಿಕ್ಷಿತ ಮಹಿಳೆಯರು ಮಾತ್ರವಲ್ಲ, ಶಿಕ್ಷಿತರು ಪ್ರಸ್ತುತ ಎದುರಿಸುತ್ತಿರುವ ಹೊಸ ಬಗೆಯ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಮಹಿಳಾ ಸಮಸ್ಯೆಗಳನ್ನು ದೇಶ, ಕಾಲ ಮತ್ತು ಪರಿಸ್ಥಿತಿಯನ್ನು ಗಮನಿಸಿ ವ್ಯಾಖ್ಯಾನಿಸಬೇಕೇ ಹೊರತು ಮೇಲ್ವರ್ಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಮಹಿಳೆಯರೆಲ್ಲರೂ ಸಬಲರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.