ADVERTISEMENT

ನಗರದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 20:15 IST
Last Updated 19 ಸೆಪ್ಟೆಂಬರ್ 2011, 20:15 IST

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಹಾಗೂ ರಸ್ತೆ ಬದಿಯ ಮರಗಳು ಉರುಳಿ ಬಿದ್ದು ಜನರು ತೊಂದರೆ ಅನುಭವಿಸುವಂತಾಯಿತು.

ದೊಮ್ಮಲೂರು ವರ್ತುಲ ರಸ್ತೆ ಸಮೀಪದ ಅಮರಜ್ಯೋತಿ ನಗರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸರ್ಜಾಪುರ ಮುಖ್ಯರಸ್ತೆಯ ರೈಂಬೊ ಡ್ರೈವ್ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳಕ್ಕೆ ಚರಂಡಿ ನೀರು ನುಗ್ಗಿದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಿವೆ.

ತ್ಯಾಗರಾಜನಗರ, ಬಸವನಗುಡಿ, ಬನಶಂಕರಿಯ ಗುರುರಾಜ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಸಮೀಪ, ಬಿಡಿಎ ಕಚೇರಿ ಬಳಿ, ಬಿಟಿಎಂ ಲೇಔಟ್ ಒಂದನೇ ಹಂತದ ಏಳನೇ ಮುಖ್ಯರಸ್ತೆ, ರಾಜಾಜಿನಗರ ಐದನೇ ಬ್ಲಾಕ್‌ನ 59ನೇ ಅಡ್ಡರಸ್ತೆ, ನಂದಿನಿ ಲೇಔಟ್ ಪೊಲೀಸ್ ಠಾಣೆ ಸಮೀಪ ಹಾಗೂ ಶೇಷಾದ್ರಿಪುರದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ವಿದ್ಯಾಪೀಠ ವೃತ್ತ ಸೇರಿದಂತೆ ಹಲವೆಡೆ ಮರಗಳು ಕಾರು ಹಾಗೂ ಬೈಕ್‌ಗಳ ಮೇಲೆ ಬಿದ್ದಿವೆ.

 ಪರಿಣಾಮ ಹಲವು ಕಾರುಗಳು ಜಖಂಗೊಂಡಿವೆ. ಬಿಡಿಎ ಕಚೇರಿ ಹಿಂಭಾಗದಲ್ಲಿ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಯಿತು. ಇದರಿಂದಾಗಿ ಸುತ್ತಮುತ್ತಲಿನ ಬಡಾ ವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಸಮಸ್ಯೆಗೆ ಸ್ಪಂದಿಸುತ್ತಿಲ್ಲ: `ಚರಂಡಿ ನೀರು ಮನೆಗೆ ನುಗ್ಗಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಹಲವು ಬಾರಿ ಕರೆ ಮಾಡಿ ದೂರು ನೀಡಿದರೂ ಪಾಲಿಕೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾಕಷ್ಟು ತೊಂದರೆಯಾಗಿದೆ~ ಎಂದು ಅಮರಜ್ಯೋತಿ ನಗರ ನಿವಾಸಿ ಚಿದಾನಂದ್ `ಪ್ರಜಾವಾಣಿ~ಗೆ ತಿಳಿಸಿದರು.

`ಮನೆಯೊಳಗೆ ನುಗ್ಗಿರುವ ಚರಂಡಿ ನೀರನ್ನು ಹೊರ ಹಾಕುವುದರಲ್ಲೇ ರಾತ್ರಿ ಕಳೆಯುವಂತಾಗಿದೆ. ಕುಟುಂಬ ಸದಸ್ಯರೆಲ್ಲ ನಿದ್ರೆ ಮಾಡದೆ ಚರಂಡಿ ನೀರನ್ನು ಹೊರಗೆ ಹಾಕುತ್ತಿದ್ದೇವೆ~ ಎಂದು ಅವರು ಹೇಳಿದರು.

ನಗರದ ಒಳ ಭಾಗದಲ್ಲಿ 18.3 ಮಿ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 28.1 ಮಿ.ಮೀ ಮಳೆ ಸುರಿದಿದೆ.

ನಗರದಲ್ಲಿ ಬೆಳಿಗ್ಗೆ ಗರಿಷ್ಠ 28.7 ಮತ್ತು ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.