ADVERTISEMENT

ನಟಿ ಪೂಜಾ ಗಾಂಧಿಗೆ ಜೀವ ಬೆದರಿಕೆ: ವಿತರಕ ಸೆರೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:25 IST
Last Updated 1 ಜೂನ್ 2011, 19:25 IST

ಬೆಂಗಳೂರು: `ಸಿನಿಮಾ ವಿತರಕ ಡಾ.ಕಿರಣ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಮತ್ತು ಅಶ್ಲೀಲ ಇ- ಮೇಲ್ ಸಂದೇಶಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದಾರೆ~ ಎಂದು ನಟಿ ಪೂಜಾ ಗಾಂಧಿ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಪೂಜಾ ಗಾಂಧಿ ಅವರು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದರು. ಆ ನಂತರ ಅವರು ದೂರಿನ ಪ್ರತಿಯನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರಿಗೆ ನೀಡಿದರು.

ಭಾರತೀಯ ದಂಡ ಸಂಹಿತೆ 506ರ ಅನ್ವಯ (ಪ್ರಾಣ ಬೆದರಿಕೆ) ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಿರಣ್‌ನನ್ನು ಬಂಧಿಸಿದ್ದಾರೆ.

`ಕಿರಣ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೂಜಾಗಾಂಧಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ~ ಎಂದು ಅಲೋಕ್ ಕುಮಾರ್ ತಿಳಿಸಿದರು.

`ಮುಂಗಾರು ಮಳೆಯ ನಿರ್ಮಾಪಕ ಇ.ಕೃಷ್ಣಪ್ಪ ಅವರ ಸಂಬಂಧಿಯಾಗಿರುವ ಕಿರಣ್ ಪರಿಚಯಸ್ಥ ಅಷ್ಟೇ. ಪೂಜಾ ಗಾಂಧಿಗೆ ಕಾರು ಕೊಡಿಸಿದ್ದು, ಆಕೆಯ ಬಳಿ ಇರುವ ಇನ್ನೋವ ಕಾರು ತನ್ನದೇ ಎಂದು ಆತ ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ಇತ್ತೀಚೆಗೆ ಹೇಳಿದ್ದ. ಈ ವಿಷಯ ನನಗೆ ಗೊತ್ತಾಗಿತ್ತು. ಬಳಿಕ ಆತ ನನಗೆ ಇ-ಮೇಲ್ ಸಂದೇಶ ಕಳುಹಿಸಿ ಪ್ರಾಣ ಬೆದರಿಕೆ ಹಾಕಿದ್ದ. ನನ್ನ ಹೆಸರಿಗೆ ಮಸಿ ಬಳಿಯುವುದಾಗಿಯೂ ಬೆದರಿಕೆ ಹಾಕಿದ್ದಾನೆ~ ಎಂದು ಪೂಜಾ ಗಾಂಧಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಿರಣ್ ಏಕೆ ಹೀಗೆ ಮಾಡಿದ್ದಾನೆ, ನಿಮಗೂ ಅವರಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು `ಆತ ಪರಿಚಯಸ್ಥ ಅಷ್ಟೇ. ಆದರೆ ಏಕೆ ಹೀಗೆ ಇ-ಮೇಲ್ ಕಳುಹಿಸುತ್ತಿದ್ದಾನೆ ಎಂದು ಗೊತ್ತಿಲ್ಲ. ಬಹುಶಃ ಆತನಿಗೆ ತಲೆ ಕೆಟ್ಟಿರಬಹುದು~ ಎಂದರು. `ನನ್ನ ಬಳಿ ಇರುವ ಕಾರುಗಳು ಅಪ್ಪ ಅಥವಾ ಅಮ್ಮನ ಹೆಸರಿನಲ್ಲಿವೆ. ವ್ಯವಹಾರಗಳನ್ನು ತಂದೆಯ ಹೆಸರಿನಲ್ಲಿ ಮಾಡಲಾಗುತ್ತಿದೆ~ ಎಂದು ಅವರು ವಿವರಿಸಿದರು.

ಕಿಮ್ಸನಲ್ಲಿ ವೈದ್ಯನಾಗಿರುವ ಕಿರಣ್ ಕೆಲ ಸಿನಿಮಾಗಳನ್ನು ವಿದೇಶದಲ್ಲಿ ಬಿಡುಗಡೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ರಾಜ್ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಅವರು ಚಿತ್ರ ಬಿಡುಗಡೆ ಮಾಡಿ ರಲಿಲ್ಲ. ಈ ಬಗ್ಗೆ ದೊಡ್ಡ ವಿವಾದವಾಗಿತ್ತು. ನಿರ್ದೇ ಶಕ ಪ್ರೇಮ್ ಕಡೆಯವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿರಣ್ ಈ ಹಿಂದೆ ದೂರು ಸಹ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.